ಹಿಂದಿನ ಬಿಜೆಪಿ ಸರಕಾರದಲ್ಲಿ ಕೆಕೆಆರ್ಡಿಬಿ ಮಂಡಳಿಯ ಹಣವನ್ನು ಆರೆಸ್ಸೆಸ್ ನವರು ಲೂಟಿ ಮಾಡಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ ಆರೋಪ

ಪ್ರಿಯಾಂಕ್ ಖರ್ಗೆ
ಕಲಬುರಗಿ : ಹಿಂದಿನ ಬಿಜೆಪಿ ಸರಕಾರದಲ್ಲಿ ಅಭಿವೃದ್ಧಿಗೆ ಮೀಸಲಿಟ್ಟ ಕೆಕೆಆರ್ಡಿಬಿ ಮಂಡಳಿಯ ಹಣವನ್ನು ಕಲಬುರಗಿಯಲ್ಲಿ ಆರೆಸ್ಸೆಸ್ ನವರು ಲೂಟಿ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೆಸ್ಸೆಸ್ ನವರು ಕೆಕೆಆರ್ ಡಿಬಿ ಮಂಡಳಿಯ ಹಣವನ್ನು ಹೇಗೆ ಲೂಟಿ ಹೊಡೆದಿದ್ದಾರೆ ಎನ್ನುವುದನ್ನು ದಾಖಲೆ ಸಮೇತ ಶೀಘ್ರದಲ್ಲೇ ನಿಮ್ಮ ಮುಂದೆ ಇಡಲಿದ್ದೇನೆ ಎಂದು ಹೇಳಿದರು.
ನಿಮ್ಮ ಹಾಗೂ ಆರೆಸ್ಸೆಸ್ ನಡುವಿನ ಸಂಘರ್ಷ ಮುಂದೆ ನಡೆಯುತ್ತಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದೀಗ ಪ್ರಾರಂಭವಾಗಿದೆ ಎಂದರು. ಆರೆಸ್ಸೆಸ್ ನೋಂದಣಿ ಆಗಿಲ್ಲ. ಒಮ್ಮೆ ನೋಂದಣಿ ಆದರೆ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಇವರು ಗುರುದಕ್ಷಿಣೆ ಎನ್ನುತ್ತಾರೆ. ನೋಂದಣಿ ಆಗದ ಸಂಘಕ್ಕೆ ಗುರುದಕ್ಷಿಣೆ ಕೊಡುವವರ ಲೆಕ್ಕಗಳು ಕೂಡಾ ಆಡಿಟ್ ಆಗಬೇಕಲ್ಲ ಎಂದರು.
ಮಾರ್ಗಸೂಚಿ ಪ್ರಕಾರ ಪಥಸಂಚಲನ:
ಮಾರ್ಗಸೂಚಿ ಪ್ರಕಾರ ಆರೆಸ್ಸೆಸ್ ಪಥಸಂಚಲನ ನಡೆದಿದೆ.ಎಷ್ಟು ಜನ ಇರಬೇಕು, ಯಾವ ಮಾರ್ಗದಲ್ಲಿ ಹೋಗಬೇಕು ಯಾರು ಯಾರು ಇರಬೇಕು ಎಂದು ನಾವು ನಿರ್ಧರಿಸಿದ್ದೇವೆ. ಅದೇ ಪ್ರಕಾರ ಎಲ್ಲವೂ ನಡೆಯುತ್ತಿದೆ ಎಂದರು.
ಮೂರು ಸಾವಿರ ಜನ ಬರುತ್ತಾರೆ ಎಂದಿದ್ದರಲ್ಲ, ಎಷ್ಟು ಜನ ಬಂದರು ? ಕೇವಲ ಮುನ್ನೂರು ಮಾತ್ರ. ಆಶೋಕ್ ಬಂದರಾ? ವಿಜಯೇಂದ್ರ ಬಂದರಾ? ಹೋಗಲಿ ಕಲಬುರಗಿಯಿಂದ ಯಾರಾದರೂ ಹೋಗಿದ್ದಾರೆಯೇ? ಒಂದು ವೇಳೆ ಚಿತ್ತಾಪುರ ಹೊರತುಪಡಿಸಿ ಹೊರಗಿನವರು ಹೋಗಿದ್ದರೆ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ ಎಂದರು.
ಬಿಹಾರ ಫಲಿತಾಂಶ ಕರ್ನಾಟಕದಲ್ಲಿಯೂ ಪರಿಣಾಮ ಬೀರಲಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, "ಮತದಾರರನ್ನು ಬಿಹಾರದಿಂದ ಕರೆಸುತ್ತಾರೆಯೇ? ಚುನಾವಣೆಯಲ್ಲಿ ಸೋಲು - ಗೆಲುವು ಸಾಮಾನ್ಯ. ನಾವು ಸೋಲು ಒಪ್ಪಿದ್ದೇವೆ. ಆದರೆ ಇಷ್ಟೊಂದು ಆಡಳಿತ ವಿರೋಧಿ ಅಲೆ ಇದ್ದಾಗಲೂ ಅವರು ಪಡೆದ ಮತಪ್ರಮಾಣದ ಬಗ್ಗೆ ಅನುಮಾನವಿದೆ. ಡಾಟಾ ಹೊರಗೆ ಬರಲಿ ನೋಡೋಣ ಎಂದು ಹೇಳಿದರು.
ಇಲ್ಲೇ ಆಳಂದ ಹಾಗೂ ಮಹಾದೇವಪುರದಲ್ಲಿ ಏನು ನಡೆದಿದೆ ಎನ್ನುವುದನ್ನು ದಾಖಲೆ ಸಮೇತ ಕೊಡುತ್ತೇವೆ. ಚುನಾವಣೆ ಆಯೋಗದ ಪಾತ್ರ ಏನಿದೆ ಎಂದು ಗೊತ್ತಾಗಲಿದೆ. ಬಿಹಾರದಲ್ಲಿ ಚುನಾವಣೆಗೆ ಮುನ್ನ ಮಹಿಳೆಯರಿಗೆ ಹಣ ಬಿಡುಗಡೆ ಮಾಡಲು ಅಡ್ಡಿ ಮಾಡದ ಚುನಾವಣೆ ಆಯೋಗ ತೆಲಂಗಾಣದಲ್ಲಿ ಅಡ್ಡಿ ಮಾಡಿತು ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರದು ಐರನ್ ಲೆಗ್ ಎನ್ನುವ ಅಶೋಕ್ ಅವರ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್, ಬಿಜೆಪಿಯವರು ಎಂದಾದರೂ ಜನರ ಪರ ಹೋರಾಟ ನಡೆಸಿದ್ದಾರೆಯೇ,? ಅಶೋಕ್ ಅವರ ಕಾಲ್ಗುಣ ಚೆನ್ನಾಗಿದೆಯಾ? ಗಣವೇಷದಾರರು ಎಂದಾದರೂ ಜನರ ಕಣ್ಣೀರು ಒರೆಸಿದ್ದು ನೋಡಿದ್ದೀರಾ ಎಂದರು.







