ಕಲಬುರಗಿ | ಶೈಕ್ಷಣಿಕ ಕ್ರಾಂತಿಯ ಕಿಡಿ ಹೊತ್ತಿಸಿದ ಸಾವಿತ್ರಿಬಾಯಿ ಫುಲೆ, ಶೇಖ್ ಫಾತಿಮಾರವರ ಸಾಧನೆ ಅನನ್ಯ : ಡಾ.ರಮೇಶ್ ಲಂಡನಕರ್

ಕಲಬುರಗಿ : ಪುರುಷ ಪ್ರಧಾನ ಸಮಾಜದಲ್ಲಿ ಇಡೀ ವ್ಯವಸ್ಥೆಯನ್ನೇ ಎದುರು ಹಾಕಿಕೊಂಡು ಶೈಕ್ಷಣಿಕ ಕ್ರಾಂತಿಯ ಕಿಡಿ ಹೊತ್ತಿಸಿದ ಸಾವಿತ್ರಿಬಾಯಿ ಫುಲೆ ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತ ಶೇಖ್ ಫಾತಿಮಾ ಅವರ ಸಾಧನೆ ಅನನ್ಯವಾದುದ್ದು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಮೇಶ್ ಲಂಡನಕರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪ್ರಭುದ್ಧ ಡೆವಲಪ್ಮೆಂಟ್ ಫೌಂಡೇಶನ್ ವತಿಯಿಂದ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಶೇಖ್ ಫಾತಿಮಾ ಅವರ ಜನ್ಮದಿನಾಚರಣೆ ಅಂಗವಾಗಿ 'ಫುಲೆರತ್ನ ಪ್ರಶಸ್ತಿ' ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯ ಶೋಧಕ ಸಮಾಜ ಕಟ್ಟಿದ ಮಹಾತ್ಮ ಜ್ಯೋತಿಬಾ ಫುಲೆ ಅವರು ತನ್ನ ಬಾಳ ಸಂಗಾತಿಯನ್ನು ಉನ್ನತ ಶಿಕ್ಷಣ ಹಾಗೂ ಶಿಕ್ಷಕ ತರಬೇತಿ ನೀಡುವ ಮೂಲಕ ಪುರುಷ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂಥವರ ಜೀವನ ಸಾಧನೆಗಳು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು.
ಗೋದುತಾಯಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಇಂದು ಮಾತೆಯೇ ಮೊದಲ ಗುರು ಎನ್ನುವ ಗಾದೆಯಿದೆ. ಆದರೆ, ಸಾವಿತ್ರಿಬಾಯಿ ಫುಲೆ ಮತ್ತು ಶೇಖ್ ಫಾತಿಮಾ ಅವರ ಕಾಲಗಟ್ಟದಲ್ಲಿ ಪತಿಯೇ ಮೊದಲ ಗುರು ಎಂಬ ವಾತಾವರಣವಿತ್ತು. ಅಂತಹ ಸಂದರ್ಭದಲ್ಲಿ 18 ಶಾಲೆಗಳನ್ನು ಆರಂಭಿಸಿರುವುದು ಯಾವ ಕ್ರಾಂತಿಗಿoತಲೂ ಕಡಿಮೆಯಲ್ಲ ಎಂದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಕಾರ್ಯಕ್ರಮದ ಅತಿಥಿಗಳಷ್ಟೇ ಪ್ರಬುದ್ಧ ಪ್ರೇಕ್ಷಕರು ಇಲ್ಲಿದ್ದೀರಿ. ಆದರೆ, ರಾಮ ಮಂದಿರ ನಿರ್ಮಾಣದ ನಂತರವಷ್ಟೇ ಸ್ವಾತಂತ್ರ್ಯ ಸಿಕ್ಕಿದೆ ಎಂದು ಮೋಹನ್ ಭಾಗವತ್ ಅವರ ಹೇಳಿಕೆ ಜನಸಾಮಾನ್ಯರಿಗೆ ಘಾಸಿ ಮಾಡಲೇ ಇಲ್ಲ ಎನ್ನುವುದೇ ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಅಂಬೇಡ್ಕರ್... ಅಂಬೇಡ್ಕರ್...' ಎನ್ನುವ ಬದಲಾಗಿ ದೇವರ ಹೆಸರು ಹೇಳಿದರೆ, ಏಳೇಳು ಜನ್ಮ ಸ್ವರ್ಗ ಸಿಗುತ್ತಿತ್ತು ಎಂದು ಹೇಳಿಕೆ ಕೊಟ್ಟ ಕೇಂದ್ರ ಗೃಹ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಬುದ್ಧ ಫೌಂಡೇಶನ್ ಅಧ್ಯಕ್ಷ ಧರ್ಮಣ್ಣ ಕೋಣೆಕರ ಅಧ್ಯಕ್ಷತೆ ವಹಿಸಿದ್ದರು. ಪುಂಡಲೀಕ ಗಾಯಕವಾಡ, ಹಣಮಂತ ಇಟಗಿ, ಅನಿಲ ಟೆಂಗಳಿ, ಧರ್ಮಣ್ಣ ಜೈನಾಪುರ, ಹವಳಪ್ಪ ಜಾನೆ, ರೂಪಾ ಕಲಕೇರಿ, ಜೈಶೀಲಾ ಬೌದ್ಧೆ, ನಾಗಪ್ಪ ಹೊಅಮನಿ, ನಾಗೇಂದ್ರ ಜವಳಿ, ರಾಜಶೇಖರ ನಿಪ್ಪಾಣಿ ಸೇರಿದಂತೆ ಹಲವರಿದ್ದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದನ್ನು ಪರಿಗಣಿಸಿ, ರಮೇಶ ಮಾಡಿಯಾಳಕರ, ಡಾ.ಅನೀಲ ಮಂಡೋಲಕರ, ನಾಮದೇವ ಕಡಕೋಳ, ಡಾ.ರಾಜಕುಮಾರ ದುಮ್ಮನಸೂರ, ರಾಜಶೇಖರ ಕಡಗನ, ಪುರ್ಷದ್ ಅಲಿ, ಜೀತೇಂದ್ರ ತಳವಾರ, ಶರಣಬಸಪ್ಪ ನಾಟೀಕರ, ಶಣ್ಮುಖ ವಾಗಮೋರೆ, ಶಿವಲಿಂಗಪ್ಪ ಮಾಸ್ಟರ್, ಉದಯಕುಮಾರ ಇಂಗಳೆ, ರಿಜ್ವಾನಾ ಪರ್ವೀನ್, ಕೌಸರ್ ಶಾಯಿನ್, ಮಧುಮತಿ ಹೆಚ್, ಪ್ರಕಾಶ ಕೋಟ್ರೆ, ಸೈಯದ್ ಇನಾಮದಾರ, ನಾಗೇಮದ್ರಪ್ಪ ಶರ್ಮಾ, ಶಿವಪುತ್ರಪ್ಪ ಹಾಗರಗಿ, ಪವಿತ್ರ ಸಂಗರಾಜ, ಮಹಾದೇವ ಕೋತ್ಲಿ ಅವರನ್ನು ಪುಲೆ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪಂಡಿತ ಮಧುಗುಣಕಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಚಿದಾನಂದ ಕುಡ್ಡನ್ ಸ್ವಾಗತಿಸಿದರು. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ವಿಠಲ ಚಿಕಿಣಿ ಸ್ವಾಗತಿಸಿದರು.







