ಸೇಡಂ | ಲಿಂ. ಶಿವಯ್ಯ ಮಠಪತಿ ಸ್ಮರಣಾರ್ಥ ಜು.23ರಂದು ‘ಶಿವ ಸಂಪದ ಪ್ರಶಸ್ತಿ’ ಪ್ರದಾನ ಸಮಾರಂಭ

ಸೇಡಂ: ಬೊಮ್ಮನಳ್ಳಿ ಸುದ್ದಿ ಪ್ರತಿಷ್ಠಾನ, ಸೇಡಂ ಹಾಗೂ ಪತ್ರಕರ್ತ ಎಂ. ವೀರಭದ್ರ ಮಾಮನಿ ಅವರ ಸ್ಮರಣಾರ್ಥವಾಗಿ ಜುಲೈ 23ರಂದು ಸಂಜೆ 5.15ಕ್ಕೆ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ನಾಗೇಂದ್ರಪ್ಪ ಪಾಟೀಲ್ ಅರೆಬೊಮ್ಮನಳ್ಳಿ ಕಲ್ಯಾಣ ಮಂಟಪದಲ್ಲಿ 17ನೇ ವರ್ಷದ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿ ಹಾಗೂ ಲಿಂ. ಶಿವಯ್ಯ ಮಠಪತಿ ಸ್ಮರಣಾರ್ಥ 4ನೇ ವರ್ಷದ ‘ಶಿವ ಸಂಪದ ಪ್ರಶಸ್ತಿ’ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯೂ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಈ ವರ್ಷದ ಪ್ರಶಸ್ತಿಗೆ ಬೆಂಗಳೂರಿನ ಟಿವಿ–5 ಸಂಪಾದಕ ದಶರಥ ಸಾವೂರ್ ಹಾಗೂ ಸುದ್ದಿಮೂಲ ಪತ್ರಿಕೆಯ ಯಾದಗಿರಿ ಸ್ಥಾನಿಕ ಸಂಪಾದಕ ಜಗದೀಶ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲಿಂ. ಶಿವಯ್ಯ ಮಠಪತಿ ಸ್ಮರಣಾರ್ಥ ನೀಡಲಾಗುವ 4ನೇ ವರ್ಷದ ‘ಶಿವ ಸಂಪದ ಪ್ರಶಸ್ತಿ’ಗೆ ಕಲಬುರಗಿಯ ದಿಶಾ ಶಿಕ್ಷಣ ಸಂಸ್ಥೆಯ ಶಿವಾನಂದ ಖಜೂರಗಿ ಆಯ್ಕೆಯಾಗಿದ್ದಾರೆ. ಸಮಾಜ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಹೊನ್ನಕಿರಣಗಿ ರಾಚೋಟೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಎಂ. ಚಂದ್ರಗುಂಡ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಿವಯ್ಯ ಸ್ವಾಮಿ ಬಿಬ್ಬಳ್ಳಿ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬೊಮ್ಮನಳ್ಳಿ ಸುದ್ದಿ ಪ್ರತಿಷ್ಠಾನದ ಸಂಸ್ಥಾಪಕ ನಾಗಯ್ಯ ಸ್ವಾಮಿ ಬೊಮ್ಮನಳ್ಳಿ, ಸಹ ಕಾರ್ಯದರ್ಶಿ ದತ್ತಾತ್ರೇಯ ಐನಾಪೂರ್, ಖಜಾಂಚಿ ಸಿದ್ದಪ್ಪ ತಳ್ಳಳ್ಳಿ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.






