ಸೇಡಂ | ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು: ಮಹೇಶ್ ಬಾಬು ಸುರ್ವೆ

ಸೇಡಂ: ಮಾಧ್ಯಮಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾ ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಮುಖ ಆಧಾರ ಸ್ತಂಭಗಳಾಗಿವೆ ಎಂದು ಪತ್ರಕರ್ತರ ವೇದಿಕೆಯ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ಅಭಿಪ್ರಾಯಪಟ್ಟರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಪತ್ರಕರ್ತರ ವೇದಿಕೆ ಬೆಂಗಳೂರು, ಕರ್ನಾಟಕ ಮೀಡಿಯಾ ಅಂಡ್ ನ್ಯೂಸ್ ಸೆಂಟರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಧ್ಯಮಗಳು ಸಮಾಜದ ಅಂಕುಡೊಂಕುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸಾರ್ವಜನಿಕ ಹಿತ ಕಾಪಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿವೆ. ಪ್ರಾಮಾಣಿಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಜನರ ಮುಂದಿಡುವುದರ ಜೊತೆಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿವೆ. ಈ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಹಿರಿಯ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಪತ್ರಕರ್ತರ ವೇದಿಕೆ ಕಳೆದ 26 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ಗಾಯಕ ಹಾಗೂ ಚಲನಚಿತ್ರ ನಟ ಶಶಿಧರ್ ಕೋಟೆ ಮಾತನಾಡಿ, ಪತ್ರಕರ್ತರೊಂದಿಗೆ ತಮ್ಮ ಕುಟುಂಬಕ್ಕಿದ್ದ ಆತ್ಮೀಯ ಸಂಬಂಧವನ್ನು ಸ್ಮರಿಸಿದರು. ತಮ್ಮ ತಂದೆಯವರಿಗೂ ಪತ್ರಕರ್ತರ ಮೇಲೆ ಅಪಾರ ಗೌರವವಿದ್ದು, ಅವರ ಮಾಧ್ಯಮ ಸ್ನೇಹವನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ‘ಪತ್ರಕರ್ತರ ಮಿತ್ರ’ ಬಿರುದು ನೀಡಿ ಸನ್ಮಾನಿಸಿದ್ದನ್ನು ನೆನಪಿಸಿಕೊಂಡರು. ಇಂತಹ ಪ್ರಾಮಾಣಿಕ ಪತ್ರಕರ್ತರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಸೇಡಂ ವರದಿಗಾರ ಸಿದ್ದಯ್ಯಸ್ವಾಮಿ ಚಿಕ್ಕಮಠ ಆಡಕಿ ಸೇರಿದಂತೆ ಹಲವು ಸಾಧಕ ಪತ್ರಕರ್ತರಿಗೆ ಪ್ರತಿಷ್ಠಿತ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೌಲ್ಯ ಶೆಟ್ಟಿ ಅವರ ದೇವಿ ನೃತ್ಯ, ಲಲಿತ ಕಲಾ ನಿಕೇತನದ ಕಲಾವಿದರ ಸಮೂಹ ನೃತ್ಯ, ವಿವಿಧ ಜನಪದ ನೃತ್ಯಗಳು, ರುಕ್ಮಿಣಿ ಸುರ್ವೆ ತಂಡದ ಸಮೂಹ ನೃತ್ಯ ಹಾಗೂ ಅನುಷಾ ಆರ್. ತಂಡದ ಜಾನಪದ ನೃತ್ಯಗಳು ವಿಶೇಷ ಆಕರ್ಷಣೆಯಾಗಿದ್ದವು.
ಬೆಂಗಳೂರಿನ ಮಾರಮ್ಮ ದೇವಸ್ಥಾನದ ಧರ್ಮದರ್ಶಿಗಳಾದ ವಿ. ಎಸ್. ಕೃಷ್ಣ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತರಾದ ವೈ. ಮಂಜುನಾಥ್, ಎಂ. ಅನಂತ್ ಕುಮಾರ್, ವಿದುಷಿ ರೇಖಾ ಜಗದೀಶ್, ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ಸುಶೀಲಾ ಎಂ. ಎಸ್, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಶಿವಕುಮಾರ ಅಪ್ಪಾಜಿ, ಮಹೇಶ ಪಾಟೀಲ ತರನಳ್ಳಿ, ಶರಣಯ್ಯಸ್ವಾಮಿ ಬೊಮ್ನಳ್ಳಿ, ಸುನೀಲ ರಾಣೀವಾಲ, ಶಿವಾನಂದ ವಾಲಿಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪತ್ರಕರ್ತರ ವೇದಿಕೆಯ ಕಾರ್ಯದರ್ಶಿ ಎಸ್. ಕೆ. ರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಯ್ ಎಂ. ಎಸ್. ವಂದಿಸಿದರು. ಪಾಂಡವಪುರ ಮಂಜುನಾಥ್ ನಿರೂಪಿಸಿದರು.






