ಅ.30ರಿಂದ ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ; ಸ್ವಾಗತ ಸಮಿತಿ ರಚನೆಗೆ ಸಭೆ

ಕಲಬುರಗಿ, ಸೆ.8: ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) 17ನೇ ರಾಜ್ಯ ಸಮ್ಮೇಳನವನ್ನು ಅ.30, 31 ಹಾಗೂ ನ.1ರಂದು ಕಲಬುರಗಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಸಮ್ಮೇಳನದ ಯಶಸ್ವಿ ಆಯೋಜನೆಗಾಗಿ ಸ್ವಾಗತ ಸಮಿತಿ ರಚನೆ ಕುರಿತು ನಗರದ ಕನ್ನಡ ಭವನದಲ್ಲಿ ಸೋಮವಾರ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಆರ್.ಕೆ. ಹುಡುಗಿ, ಎಸ್ಎಫ್ಐ ದೇಶದ ಪ್ರಮುಖ ಸೈದ್ಧಾಂತಿಕ ವಿದ್ಯಾರ್ಥಿ ಸಂಘಟನೆಗಳಲ್ಲಿ ಒಂದಾಗಿದ್ದು, ಅದರ 17ನೇ ರಾಜ್ಯ ಸಮ್ಮೇಳನವನ್ನು ತೊಗರಿಯ ನಾಡು ಕಲಬುರಗಿಯಲ್ಲಿ ಆಯೋಜಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಸಮ್ಮೇಳನ ಯಶಸ್ವಿಯಾಗಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ವಿದ್ಯಾರ್ಥಿ ಚಳವಳಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಮಹತ್ವದ ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಸಾಹಿತಿಗಳಾದ ಕೆ. ನೀಲಾ, ಮೀನಾಕ್ಷಿ ಬಾಳಿ, ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್., ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಸಾಹಿತಿ ಡಾ. ಜಯದೇವಿ ಗಾಯಕವಾಡ, ಪ್ರಗತಿಪರ ಚಿಂತಕ ಅಫ್ಜಲ್ ಮೆಹಮೂದ್, ಎಸ್ಎಫ್ಐ ಮಾಜಿ ರಾಜ್ಯ ಮುಖಂಡ ಸಿ.ಬಿ. ಪಾಟೀಲ ಒಕಳಿ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಿಬ್ಬಂದಿ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಅಸ್ಗರ ಅಲಿ ಚುಲಬುಲ್, ದಲಿತಪರ ಮುಖಂಡರಾದ ಅರ್ಜುನ ಭದ್ರೆ, ಮರೆಯಪ್ಪ ಹಳ್ಳಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆರ್.ಜಿ. ಶೆಟ್ಕಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಿ ಸಮ್ಮೇಳನದ ಯಶಸ್ಸಿಗೆ ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಇಮಾಮ್ ಸಾಬ್ ನದಾಫ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಗುಳೆದಾಳ, ಜಿಲ್ಲಾಧ್ಯಕ್ಷ ಸರ್ವೆಶ್ ಪಿ. ಮಾವಿನಕರ್, ಕಾರ್ಯದರ್ಶಿ ಸುಜಾತ ವೈ., ಉಪಾಧ್ಯಕ್ಷೆ ಪ್ರೇಮ, ಮುಖಂಡರಾದ ಮಂಜು, ಪ್ರದೀಪ್ ಮ್ಯಾಗಡಿ, ತಯಣ್ಣ, ನಾಗರಾಜ್, ಬೃಂದಾ ಎಸ್., ಸಿಐಟಿಯು ಕಾರ್ಯದರ್ಶಿ ಶಾಂತ ಎಸ್. ಘಂಟೆ, ದೇವದಾಸಿ ಮಹಿಳಾ ಸಂಘದ ಚಂದಾಮ್ಮ, ಕಟ್ಟಡ ಕಾರ್ಮಿಕ ಮುಖಂಡರಾದ ಶ್ರೀಮಂತ ಬಿರಾದಾರ, ನಾಗಪ್ಪ ರಾಯಚೂರುಕರ್, ಡಿವೈಎಫ್ಐ ಜಿಲ್ಲಾಧ್ಯಕ್ಷೆ ಸಮೀನಾ, ಸಾಮೂಹಿಕ ಸಂಘಟನೆಗಳ ಮುಖಂಡರಾದ ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ್ ಸೇರಿದಂತೆ ಎಸ್ಎಫ್ಐ ಜಿಲ್ಲಾ ಸಮಿತಿ ಸದಸ್ಯರು, ವಿವಿಧ ತಾಲೂಕುಗಳ ಮುಖಂಡರು, ಚಳುವಳಿಯ ಹಿತೈಷಿಗಳು ಹಾಗೂ ಸಾಮೂಹಿಕ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.






