ಶಹಾಬಾದ್ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಶಹಾಬಾದ್ : ತಾಲೂಕು ಕಚೇರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಡಾ.ಅಂಬೇಡ್ಕರ್ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ್, ಶಹಾಬಾದ್ ತಾಲೂಕಿನ ಪ್ರಜಾಸೌಧ ನಿರ್ಮಿಸಲು ಮರಗೋಳ ಕಾಲೇಜ್ ಪಕ್ಕದಲ್ಲಿ ಇರುವ ಜಮೀನನ್ನು ತಾಲೂಕಾಡಳಿತ ಗುರುತಿಸಿದ್ದು, ಅದನ್ನು ಹೈದ್ರಾಬಾದ್ ಶಿಕ್ಷಣ ಸಂಸ್ಥೆಯ ಎಸ್. ಎಸ್. ಮರಗೋಳ ಕಾಲೇಜಿನವರು ಕೋರ್ಟಿನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಪೂರ್ಣ ಜಾಗ ಸರಕಾರದ್ದು, ಆದರೆ ಅವರು ಬೇನಾಮಿಯಾಗಿ ಬಳಸಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಾಲೂಕಿನಲ್ಲಿ ಶೀಘ್ರ ಪ್ರಜಾಸೌಧ ನಿರ್ಮಾಣ ಮಾಡಿಕೊಡಬೇಕು. ತಾಪಂಯಲ್ಲಿ 7 ಗ್ರಾಪಂಗಳು ಒಳಗೊಂಡು ಸುಮಾರು 11 ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿಯಿಲ್ಲ. ಕೂಡಲೇ ಸ್ಮಶಾನಭೂಮಿ ಮಂಜೂರು ಮಾಡಬೇಕು. ಮುಗುಳನಾಗಾವ್ ಗ್ರಾಮದಲ್ಲಿ ದಲಿತರಿಗೆ ನಿವೇಶನಗಳನ್ನು ನೀಡಿ, ಹಕ್ಕುಪತ್ರವನ್ನು ವಿತರಿಸಿದ್ದಾರೆ. ಆದರೆ ಇಲ್ಲಿಯವರೆಗೆ ಪಹಣಿಯಲ್ಲಿ ಜಮೀನಿನ ಮಾಲಕರ ಹೆಸರು ಹಾಗೆಯೇ ಇದೆ. ಅದನ್ನ ಬದಲಾಯಿಸಬೇಕೆಂದು ಹೇಳಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ನೀಲಪ್ರಭ ಬಬಲಾದ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸೇಡಂ ಉಪವಿಭಾಗೀಯ ಸಂಚಾಲಕ ಮಲ್ಲಿಕಾರ್ಜುನ ಜಲಂಧರ್, ರಾಮಕುಮಾರ ಸಿಂಘೆ, ತಾಲೂಕು ಸಂಚಾಲಕ ತಿಪ್ಪಣ್ಣ ಧನ್ನೇಕರ್, ಜೈಭೀಮ್ ರಸ್ತಾಪೂರ, ಸಂತೋಷ ಬಂಡೇರ್, ಸುನೀಲ ಮೆಂಗನ್, ರಾಣೋಜಿ ಹಾದಿಮನಿ, ಸುನೀಲ ದೊಡ್ಡಮನಿ, ಬಸಲಿಂಗ ಕಟ್ಟಿ, ಭೀಮಾಶಂಕರ ಕಾಂಬಳೆ, ಮಹಾದೇವ ಮೇತ್ರೆ, ರಾಕೇಶ ಜಾಯಿ, ಶಿವಲಿಂಗ ಜಿವಣಗಿ, ಶಂಕರ ಜಾನಾ, ಜೆಡಿಎಸ್ ಅಧ್ಯಕ್ಷ ಸಾಬೀರ ಬಾರಿ ಸೇರಿದಂತೆ ಅನೇಕರು ಇದ್ದರು.







