ಶಹಾಬಾದ್ | ಜಲಾವೃತಗೊಂಡ ಹೊನಗುಂಟಾ ಗ್ರಾಮ : ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ

ಕಲಬುರಗಿ: ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಾಂತ ಬಾರಿ ಮಳೆಯಾಗುತ್ತಿದ್ದು, ಕಾಗಿಣ ಹಾಗೂ ಭೀಮಾ ನದಿಗಳ ಸಹ ಮೈದುಂಬಿ ಹರಿಯುತ್ತಿರುವ ಕಾರಣ ಶಹಾಬಾದ್ ತಾಲ್ಲೂಕಿನ ಹೊನಗುಂಟಾ ಗ್ರಾಮದ ಬಹುತೇಕ ಮನೆಗಳಲ್ಲಿ ನೀರು ನುಗ್ಗಿದೆ.
ಪ್ರವಾಹದಿಂದ ನೀರು ನುಗ್ಗಿರುವ ಕಾರಣ ಗ್ರಾಮದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ದವಸ ಧಾನ್ಯಗಳು ನೀರುಪಾಲಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತದಿಂದ ಕೇವಲ ಎರಡು ಗಂಜಿ ಕೇಂದ್ರವನ್ನು ಪ್ರಾರಂಭಿಸಿ ಪ್ರವಾಹ ಪೀಡಿತರಿಗೆ ಊಟದ ವ್ಯವಸ್ಥೆಯನ್ನು ಹಾಗೂ ಒಂದು ಟ್ಯಾಂಕರ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ರಾಮದ ಸುತ್ತಲೂ ಪ್ರವಾಹದ ನೀರು ಆವರಿಸಿಕೊಂಡಿರುವುದರಿಂದ ಸಾಕಷ್ಟು ಜನರು ಆಹಾರ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಈಗ ಮಾಡಿರುವ ವ್ಯವಸ್ಥೆಯು ಸಾಕಾಗದೆ ಇರುವುದರಿಂದ ಹೆಚ್ಚಿನ ಪ್ರಮಾಣದ ಗಂಜಿ ಕೇಂದ್ರಗಳನ್ನು ತೆರೆಯಬೇಕು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಹಾಗೂ ಬೋಟಿನ ವ್ಯವಸ್ಥೆಯನ್ನು ಮಾಡಬೇಕೆಂದು ಹೊನಗುಂಟಾ ನಾಗರಿಕ ಹೋರಾಟ ಸಮಿತಿಯು ಒತ್ತಾಯಿಸಿದೆ.
ಯುವಜನ ಸಂಘಟನೆಯಾದ ಎ.ಐ.ಡಿ.ವೈ.ಓ ನಾಯಕರಾದ ರಮೇಶ ದೇವಕರ್ ಹಾಗೂ ರೈತ ಕೃಷಿ ಕಾರ್ಮಿಕ ಸಂಘಟನೆಯಾದ ಎ.ಐ.ಕೆ.ಕೆ.ಎಮ್.ಎಸ್ ನ ನಾಯಕರಾದ ರಾಜೇಂದ್ರ ಆತೂರ್ ಅವರು ಈ ಸಂದರ್ಭದಲ್ಲಿ ಪ್ರವಾಹಪೀಡಿತ ಸ್ಥಳಕ್ಕೆ ಭೇಟಿ ನೀಡಿದರು.
ಸೇಡಂ ಸಹಾಯಕ ಆಯುಕ್ತರು, ತಾಲೂಕ ಪಂಚಾಯತ್ ಕಾರ್ಯಾನಿರ್ವಾಹಕ ಅಧಿಕಾರಿ ಹಾಗೂ ಗ್ರೇಡ್ -2 ತಹಶೀಲ್ದಾರ ಅವರೊಂದಿಗೆ ಮಾತನಾಡಿ ಆದಷ್ಟು ಬೇಗನೆ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಬೇಕೆಂದು ಒತ್ತಡ ಹಾಕಿದರು.
ನಾಗರಿಕ ಹೋರಾಟ ಸಮಿತಿಯ ಸದಸ್ಯರಾದ ಶಿವು ಬುರ್ಲಿ, ಲಕ್ಷ್ಮಣ ಕೋಲೆ, ಚಂದ್ರು ಮರಗೋಳ, ದೀಪಣ್ಣ ಕೋಲೆ, ದೇವರಾಜ ರಾಜೋಳ್ ಮುಂತಾದವರು ಉಪಸ್ಥಿತರಿದ್ದರು.







