ಉರ್ದು ಪ್ರಭಾವದ ನಡುವೆ ಕನ್ನಡ ಕಟ್ಟಿದ ಗಝಲ್ ಕವಿ ಶಾಂತರಸ: ಅಮರೇಶ ನುಗಡೋಣಿ

ಕಲಬುರಗಿ: ಸ್ವಾತಂತ್ರ್ಯ ಪೂರ್ವ ನಿಝಾಮನ ಆಳ್ವಿಕೆಯಲ್ಲಿದ್ದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉರ್ದು ಪ್ರಭಾವ ನಡುವೆಯೂ ಕನ್ನಡವನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಗಝಲ್ ಕವಿ ಶಾಂತರಸ ಹೆಂಬೆರಳು ಅವರಿಗೆ ಸಲ್ಲುತ್ತದೆ ಎಂದು ಕತೆಗಾರ ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.
ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಬೆಂಗಳೂರಿನ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಹರಿಹರ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ 'ಶಾಂತರಸರ ಸಾಹಿತ್ಯ ಲೋಕ' ಕುರಿತು ಒಂದು ದಿನದ ಸಾಹಿತ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕವಿ ಶಾಂತರಸ ಹೆಂಬೆರಳು ಅವರು ಬಡತನದಲ್ಲಿ ಹುಟ್ಟಿದರೂ ಜಂಗಮ ಸಮುದಾಯಕ್ಕೆ ಸೇರಿದ್ದರಿಂದ ಪರಂಪರಾಗತ ಜ್ಞಾನವುಳ್ಳವರಾಗಿದ್ದರು. ಕನ್ನಡದ ಲಿಪಿ ಇದ್ದರೂ ಮೋಡಿ ಬರವಣಿಗೆಯ ಆ ಕಾಲದಲ್ಲಿ ರಾಯಚೂರಿನಲ್ಲಿ 'ಸತ್ಯ ಸ್ನೇಹಿ' ಪ್ರಕಾಶನ ತೆರೆದು ಅನೇಕ ಲೇಖಕರಿಗೆ ಪ್ರೋತ್ಸಾಹ ನೀಡಿದ್ದರು. ಉರ್ದುವಿನಿಂದ ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಕನ್ನಡ ಪಸರನ್ನು ಹೆಚ್ಚಿಸುವ ಕೆಲಸ ಮಾಡಿದ್ದರು ಎಂದರು.
ಪ್ರಾಂತ್ಯಕ್ಕೆ ಅನ್ಯಾಯವಾದಾಗ, ಸಲ್ಲದ ವಿಚಾರವನ್ನು ನೇರವಾಗಿ ಪ್ರತಿಭಟಿಸುತ್ತಿದ್ದ ಬಂಡಾಯ ಗುಣ ಅವರಲ್ಲಿ ಕಾಣಬಹುದು. ಬಸವಣ್ಣನವರ ವಚನಗಳಿಂದ ಪ್ರಭಾವಿತರಾಗಿದ್ದ ಗಝಲ್ ಕವಿ ಶಾಂತರಸರು ಜಾತ್ಯತೀತ ಮನೋಭಾವನೆ ಉಳ್ಳವರಾಗಿದ್ದರು. ಸಾಹಿತ್ಯ ಲೋಕದ ಸಾಕ್ಷಿ ಪ್ರಜ್ಞೆಯಾಗಿರುವ ಶಾಂತರಸರು ದಕ್ಷಿಣದ ಬಹುತೇಕರಿಗೆ ಅಪರಿಚಿತರಾಗಿದ್ದಾರೆ. ಹೀಗಾಗಿ ಅವರನ್ನು ದಕ್ಷಿಣದ ಕಡೆ ನಾವು ಹೆಚ್ಚು ತೆಗೆದುಕೊಂಡು ಹೋಗಬೇಕಿದೆ ಎಂದು ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.
ಕಲ್ಯಾಣಕ್ಕೆ ಬೇಕು ಪ್ರತಿಷ್ಠಾನ:
ಗುಲ್ಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ 27 ಪ್ರತಿಷ್ಠಾನಗಳು ಸ್ಥಾಪಿಸಿದೆಯಾದರೂ ಕಲ್ಯಾಣ ಭಾಗದಲ್ಲಿ ಒಂದು ಇಲ್ಲದಿರುವುದು ದುರಂತ. ವಚನ ಸಾಹಿತ್ಯ, ದಾಸ ಸಾಹಿತ್ಯ, ದಲಿತ ಚಳವಳಿ ಕಂಡ ನೆಲ ಇದಾಗಿದೆ. ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ ನಾಡಿಗೆ ನೀಡಿದ ಪುಣ್ಯ ಭೂಮಿ ಇದು. ಸಾಂಸ್ಕೃತಿಕ ಸಿರಿವಂತಿಕೆಯಿದ್ದರೂ ಒಂದೂ ಪ್ರತಿಷ್ಠಾನ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರಕಾರ ಕಲ್ಯಾಣ ಭಾಗದಲ್ಲಿ ಕವಿ, ಸಾಹಿತಿಗಳ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬೇಕು ಎಂದು ಒತ್ತಾಯ ಮಾಡಿದರು.
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಎಚ್.ಆರ್. ಸುಜಾತಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಎಚ್. ಎಸ್. ಬಸವಪ್ರಭು, ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ಪ್ರಸಾದ ಉಪಸ್ಥಿತರಿದ್ದರು.
ಕಾರ್ಯಾಗಾರ ಅಂಗವಾಗಿ ನಡೆದ ಮೊದಲನೇ ಗೋಷ್ಠಿಯಲ್ಲಿ 'ಸಂಶೋಧನೆ ಮತ್ತು ಗ್ರಂಥ ಸಂಪಾದನೆ' ಕುರಿತು ಹೊಸಪೇಟೆಯ ಸಂಶೋಧಕ ಕೆ. ರವೀಂದ್ರನಾಥ, 'ಗದ್ಯ ಸಾಹಿತ್ಯ' ಕುರಿತು ವಿಮರ್ಶಕ ಶ್ರೀಶೈಲ್ ನಾಗರಾಳ ಪ್ರಬಂಧ ಮಂಡಿಸಿದರು.
ಎರಡನೇ ಗೋಷ್ಠಿಯಲ್ಲಿ 'ಸಾಹಿತ್ಯದಲ್ಲಿ ಸ್ತ್ರೀಲೋಕ' ಬಗ್ಗೆ ವಿಮರ್ಶಕಿ ಶೈಲಜಾ ಬಾಗೇವಾಡಿ, 'ಕಾವ್ಯಲೋಕ' ಕುರಿತು ರಾಯಚೂರಿನ ಕಥೆಗಾರ ಮಹಾಂತೇಶ ನವಲಕಲ್ ಹಾಗೂ 'ಅನುವಾದ ಸಾಹಿತ್ಯ' ಕುರಿತು ಅನುವಾದಕ ಸೂರ್ಯಕಾಂತ ಸುಜ್ಯಾತ ಮಾತನಾಡಿದರು.







