Kalaburagi | ಡಾ. ಅಜಯ್ ಸಿಂಗ್ಗೆ ಸಚಿವ ಸ್ಥಾನ ನೀಡುವಂತೆ ರಕ್ತದಲ್ಲಿ ಪತ್ರ ಬರೆದು ಎಐಸಿಸಿ ಅಧ್ಯಕ್ಷರಿಗೆ ಮನವಿ

ಕಲಬುರಗಿ: ಜೇವರ್ಗಿ ಶಾಸಕ ಡಾ. ಅಜಯ್ ಧರಂಸಿಂಗ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ಮುಖಂಡರೊಬ್ಬರು ರಕ್ತದಲ್ಲಿ ಮನವಿ ಪತ್ರ ಬರೆದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿರುವ ಘಟನೆ ಗಮನ ಸೆಳೆದಿದೆ.
ಜೇವರ್ಗಿ ಯುವ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಪಟೇಲ್ ಮುದಬಾಳ ಅವರು ಡಾ. ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ರಕ್ತದಲ್ಲೇ ಪತ್ರ ಬರೆದು ಖರ್ಗೆ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಿಯಾಝ್ ಪಟೇಲ್ ಮುದಬಾಳ, “ಡಾ. ಅಜಯ್ ಸಿಂಗ್ ಅವರು ಕೇವಲ ನಮ್ಮ ನಾಯಕರಲ್ಲ, ಯುವ ಸಮುದಾಯದ ಆಶಾಕಿರಣವಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಅವರಿಗೆ ಸಚಿವ ಸ್ಥಾನ ನೀಡುವುದು ಅಗತ್ಯವಾಗಿದೆ. ನಮ್ಮ ಈ ಮನವಿ ಜೇವರ್ಗಿ ಕ್ಷೇತ್ರದ ಯುವಕರ ಭಾವನೆಗಳ ಪ್ರತೀಕವಾಗಿದೆ,” ಎಂದು ಹೇಳಿದರು.
ಡಾ. ಅಜಯ್ ಸಿಂಗ್ ಅವರು ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಎಲ್ಲ ವರ್ಗಗಳ ಜನರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಅವರ ನಾಯಕತ್ವದ ಮೇಲೆ ಯುವ ಸಮುದಾಯ ಅಪಾರ ವಿಶ್ವಾಸ ಹೊಂದಿದ್ದು, ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟರು.
ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಬುದಿಯಾಳ್, ಚಂದ್ರಶೇಖರ್ ನೇರಡಿಗಿ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರು, ಪುರಸಭೆ ಸದಸ್ಯ ಶಿವಕುಮಾರ್ ಕಲ್ಲಾ, ಭಗವಂತರಾಯ್ ಗೌಡ ಸೇರಿದಂತೆ ನೂರಾರು ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






