ಶಿವಾನಂದ ಶಿವಯೋಗಿಗಳ ಆದರ್ಶಗಳು ಯುವಪೀಳಿಗೆಗೆ ದಾರಿದೀಪ: ಸಚಿವ ಡಾ. ಅಜಯ್ ಧರ್ಮಸಿಂಗ್
ಸೊನ್ನದಲ್ಲಿ 47ನೇ ಪುಣ್ಯಸ್ಮರಣೋತ್ಸವ; ಗ್ರಂಥ ಲೋಕಾರ್ಪಣೆ, ಪುತ್ಥಳಿ ಅನಾವರಣ ಕಾರ್ಯಕ್ರಮ

ಜೇವರ್ಗಿ: ಆಧ್ಯಾತ್ಮಿಕ ಚಿಂತನೆ, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಪೂಜ್ಯ ಶ್ರೀ ಮ.ನಿ.ಪ್ರ. ಶಿವಾನಂದ ಶಿವಯೋಗಿಗಳ ಜೀವನ ಮತ್ತು ಆದರ್ಶಗಳು ಇಂದಿನ ಹಾಗೂ ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿರಕ್ತಮಠದಲ್ಲಿ ಆಯೋಜಿಸಿದ್ದ ಶಿವಾನಂದ ಶಿವಯೋಗಿಗಳ 47ನೇ ಪುಣ್ಯಸ್ಮರಣೋತ್ಸವ, ‘ಸೊನ್ನದ ಶ್ರೀ ಶಿವಾನಂದ ಶಿವಯೋಗಿಗಳು’ ಗ್ರಂಥ ಲೋಕಾರ್ಪಣೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಾನಂದ ಶಿವಯೋಗಿಗಳು ಆಧ್ಯಾತ್ಮಿಕತೆಯನ್ನು ವೈಯಕ್ತಿಕ ಸಾಧನೆಗೆ ಮಾತ್ರ ಸೀಮಿತಗೊಳಿಸದೆ, ಸಮಾಜಸೇವೆ ಮತ್ತು ಜನಜಾಗೃತಿಯೊಂದಿಗೆ ಬೆಸೆದಿದ್ದರು. ಮಾನವೀಯತೆ, ಸೇವೆ ಮತ್ತು ಸಮಾಜದ ಒಳಿತಿಗಾಗಿ ಬದುಕಬೇಕು ಎಂಬ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಅವರ ಜೀವನಾದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಗುರುಮಿಠಕಲ್ ಶಾಸಕ ಶರಣಗೌಡ ಪಾಟೀಲ ಕಂದಕೂರ ಮಾತನಾಡಿ, ಗುರುಗಳು ಶಿಷ್ಯರ ಆಧ್ಯಾತ್ಮಿಕ ಉನ್ನತಿಗೆ ಮಾರ್ಗದರ್ಶಕರಾಗಿದ್ದು, ಗುರು ನೀಡುವ ಜ್ಞಾನ ಮತ್ತು ಸಂಸ್ಕಾರ ಶಾಶ್ವತ ಸಂಪತ್ತಾಗಿದೆ. ಆದ್ದರಿಂದ ಗುರುಗಳ ಮಾರ್ಗದರ್ಶನದಲ್ಲಿ ಜೀವನ ಸಾಗಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ದಿ. ಎನ್. ಧರ್ಮಸಿಂಗ್ ಅವರ ಜನಪರ ಮತ್ತು ಅಭಿವೃದ್ಧಿಪರ ಆದರ್ಶಗಳನ್ನು ಮುಂದುವರಿಸಿಕೊಂಡು ಡಾ. ಅಜಯ್ ಧರ್ಮಸಿಂಗ್ ಅವರು ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ರೈತರ ಹಿತಕ್ಕಾಗಿ ಕೆರೆ ತುಂಬಿಸುವ ಯೋಜನೆಗಳು, ಚೆಕ್ಡ್ಯಾಂ ನಿರ್ಮಾಣ ಸೇರಿದಂತೆ ಅಗತ್ಯ ನೀರಾವರಿ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಾರಂಗಮಠ ಶ್ರೀಶೈಲಂ ಹಾಗೂ ಸುಲಫಲಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಸೊನ್ನದ ಡಾ. ಶಿವಾನಂದ ಮಹಾಸ್ವಾಮಿಗಳು, ಆಳಂದ ಜಾಲವಾದಿಯ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಜಾಲವಾದಿ-ಇಜೇರಿ-ಮಸಬಿನಾಳ ವಿರಕ್ತಮಠದ ಸಿದ್ಧರಾಮ ಮಹಾಸ್ವಾಮಿಗಳು, ನೆಲೋಗಿಯ ಸಿದ್ಧಲಿಂಗ ಮಹಾಸ್ವಾಮಿಗಳು, ನಂದವಾಡಗಿ-ಆಳಂದ ಜಾಲವಾದಿ ಮಹಾಂತೇಶ್ವರ ಹಿರೇಮಠದ ಡಾ. ಚನ್ನಬಸವ ಶಿವಾಚಾರ್ಯರು, ಜೇರಟಗಿಯ ಮಹಾಂತ ಮಹಾಸ್ವಾಮಿಗಳು, ಶಾಸಕ ಅಶೋಕ ಮನಗೂಳಿ, ರೈತ ಹೋರಾಟಗಾರ ಡಾ. ಕೇದಾರಲಿಂಗಯ್ಯ ಹಿರೇಮಠ, ವಿಶ್ವನಾಥ ಡೊಣ್ಣೂರ, ಗೌರಬಾಯಿ ಶಾಂತವೀರ ಬಾಗೇವಾಡಿ, ಯಡ್ರಾಮಿಯ ಸಿದ್ಧಲಿಂಗ ಮಹಾಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಾಜಿ ಜಿಪಂ ಉಪಾಧ್ಯಕ್ಷ ಗುರಲಿಂಗಪ್ಪಗೌಡ ಪಾಟೀಲ ಆಂದೋಲ, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ಕಾಶಿರಾಯಗೌಡ ಯಲಗೋಡ, ಸಿದ್ದು ಸಾಹು ಅಂಗಡಿ, ಮಲ್ಲಿಕಾರ್ಜುನ ಬಿರೇದಾರ, ಸದಾನಂದ ಪಾಟೀಲ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಗುರಣ್ಣ ಸರನಾಳ, ಶರಭು ಕಲ್ಯಾಣಿ, ಸಿದ್ದು ಮಾವನೂರ ಸೇರಿದಂತೆ ಮಠದ ಭಕ್ತರು ಹಾಗೂ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಕನೂರದ ಚನ್ನಮಲ್ಲ ಸ್ವಾಮೀಜಿ ಕಾರ್ಯಕ್ರಮ ನಿರೂಪಿಸಿದರು.






