ಜೇವರ್ಗಿಯಲ್ಲಿ ಮೂರು ದಿನಗಳ ಬಂಜಾರ ಸಂಸ್ಕೃತಿ ಕಾರ್ಯಾಗಾರ

ಜೇವರ್ಗಿ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಇವರ ಆಶ್ರಯದಲ್ಲಿ ಹಾಗೂ ತಾಲೂಕಿನ ಮಂದೇವಾಲ ತಾಂಡದ ಇಂದಿರಾನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಂಯೋಗದಲ್ಲಿ ಮೇ 27, 28 ಮತ್ತು 29 ರಂದು ಮೂರು ದಿನಗಳ ಬಂಜಾರ ಸಂಸ್ಕೃತಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.
ತಾಲೂಕಿನ ಮಂದೇವಾಲ ತಾಂಡದ ಇಂದಿರಾನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಬಂಜಾರ ಸಮುದಾಯದ ಸಾಂಪ್ರದಾಯಿಕ ಗೀತೆಗಳು, ಆಚರಣೆಗಳು ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅನುಭವಿ ಹಿರಿಯ ಸಾಹಿತಿಗಳು ಮತ್ತು ತರಬೇತುದಾರರಿಂದ ವಿಶೇಷ ತರಬೇತಿ ನೀಡಲಾಗುವುದು.
ಮಹಿಳೆಯರಿಗಾಗಿ ಒಳಂಗ, ವದಾವ, ದಳವಾ ಧೋಕಾಯೆರೊ, ಸುರಗಿ ಗೀತೆ, ದೋರಣ ಛೋಡಾಯೇರ ಗೀತೆ ಹಾಗೂ ಹವೇಲಿ ಸೇರಿದಂತೆ ಹಲವು ಸಾಂಪ್ರದಾಯಿಕ ಗೀತೆಗಳ ತರಬೇತಿ ಹಮ್ಮಿಕೊಳ್ಳಲಾಗಿದೆ. ಪುರುಷರಿಗಾಗಿ ಕಸಲಾತ ಕಡಿ, ಸಗಾಯಿರ ಕಡಿ, ವದಾಯಿರ ಕಡಿ, ಘೋಟಾರ ಕಡಿ, ಖಿಚಡಿರ ಕಡಿ, ಥಾಳಿ ಚೋಡಾಎರ ಕಡಿ, ಮರಣೇರ ಸಿಕವಾಡಿ, ವಿಂತಿ ಅರದಾಸ, ಹೋಳಿರ ವಾಂಜನಾ ಹಾಗೂ ದಸರಾವ ಆರತಿ ಸೇರಿದಂತೆ ಬಂಜಾರ ಸಂಸ್ಕೃತಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ತರಬೇತಿ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಮೂರು ದಿನಗಳ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ತರಬೇತುದಾರರಿಗೆ ಬರುವ ಹಾಗೂ ಹೋಗುವ ಬಸ್ ಪ್ರಯಾಣ ವೆಚ್ಚವನ್ನು ಸಹ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮವನ್ನು ಡಾ.ಮೋತಿಲಾಲ ರೂ.ಚವ್ಹಾಣ ಉದ್ಘಾಟಿಸಲಿದ್ದು, ಎಸ್ಡಿಎಂಸಿ ಅಧ್ಯಕ್ಷ ಮುಕುಂದ ಕೆ.ಪವಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜೇವರ್ಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉಸ್ತುವಾರಿಯನ್ನು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ಸದಸ್ಯ ಸಂಚಾಲಕರಾದ ಅಣ್ಣಾರಾಯ ಎಚ್. ರಾಠೋಡ ವಹಿಸಿಕೊಂಡಿದ್ದಾರೆ.
ಬಂಜಾರ ಸಮಾಜದ ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಲು 9980391235 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದ್ದಾರೆ.






