ಗುಲ್ಬರ್ಗಾ ವಿವಿಯಲ್ಲಿ ಎರಡು ದಿನದ ರಾಷ್ಟ್ರೀಯ ಸಾಹಿತ್ಯೋತ್ಸವ ಉದ್ಘಾಟನೆ
ಸೃಜನಶೀಲತೆ ಯಾವಾಗಲೂ ಪ್ರಜಾಸತ್ತಾತ್ಮಕ : ಪ್ರೊ.ಬರಗೂರು ರಾಮಚಂದ್ರಪ್ಪ

ಕಲಬುರಗಿ : ಸೃಜನಶೀಲತೆಯು ಯಾವಾಗಲೂ ಪ್ರಜಾಸತ್ತಾತ್ಮಕವಾಗಿರುತ್ತದೆ. ಅದು ಪ್ರಜಾಪ್ರಭುತ್ವವನ್ನು ಜಾಗೃತವಾಗಿರುವಂತೆ ಎಚ್ಚರ ವಹಿಸುತ್ತದೆ ಎಂದು ಬೆಂಗಳೂರಿನ ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ಕನ್ನಡ ಅಧ್ಯಯನ ಸಂಸ್ಥೆ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ `ಕನ್ನಡ ಭಾಷಾಭಿವೃದ್ಧಿ ಯೋಜನೆ ಅಡಿಯಲ್ಲಿ ಆಯೋಜಿಸುತ್ತಿರುವ `ಸಮಕಾಲೀನ ಸಾಹಿತ್ಯದ ನೆಲೆ ನಿಲುವು’ ಶೀರ್ಷಿಕೆಯಡಿ, ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಪಂಚೇಂದ್ರೀಯಗಳಲ್ಲಿ ದೇಹ ಎಂಬುದು ವಿಶ್ವ ಒಕ್ಕೂಟದ ರೂಪಕ. ಇದರಲ್ಲಿ ಜೀವಶಾಸ್ತ್ರದ ಹೃದಯ ಮತ್ತು ಸಾಹಿತ್ಯದ ಹೃದಯ ಬೇರೆ ಬೇರೆ. ಜೀವಶಾಶ್ತ್ರದ ಹೃದಯ ಆಕಾರ ಹೊಂದಿದ್ದರೆ, ಸಾಹಿತ್ಯದ ಹೃದಯ ನಿರಾಕಾರವಾಗಿರುತ್ತದೆ. ಲೋಕಾಂತ ಮತ್ತು ಏಕಾಂತವನ್ನು ಪ್ರತಿನಿಧಿಸುತ್ತವೆ ಎಂದರು.
ಆಶಯ ನುಡಿಗಳನ್ನಾಡಿದ ಹಾಸನದ ಸಾಹಿತಿ ಜ.ನಾ.ತೇಜಶ್ರೀ ಅವರು, ಭಾಷೆಯೊಳಗೆ ಮತ್ತೆ ಹೊಸ ಭಾಷೆಯನ್ನು ಕಟ್ಟುವ ಹೊಸ ಕ್ರಾಂತಿ ಇಂದಿನ ಅಗತ್ಯ. ಜಾತಿ ವಿನಾಶದ ಚಳವಳಿಗಳು ನಡೆಯುತ್ತಿದ್ದ ಆ ಕಾಲ ಮತ್ತು ಜಾತಿಯ ಸ್ವರೂಪದಲ್ಲಿ ಬದಲಾಗುತ್ತಿರುವ ಇಂದಿನ ಸ್ಥಿತ್ಯಂತರಗಳ ಬಗ್ಗೆ ವಿವರಿಸಿದರು.
ದೇವರೇ ಸತ್ಯ ಅನ್ನುತ್ತಿದ್ದ ಗಾಂಧಿ ಅವರು ಸತ್ಯವೇ ದೇವರು ಎಂಬುದನ್ನು ನೆನಪಿಸಿದ ಪ್ರೊ.ಬರಗೂರು ರಾಮಚಂದ್ರಪ್ಪ ಅವರು, ಒಂದು ಹಿಡಿ ಉಪ್ಪು ಸತ್ಯಾಗ್ರಹ ಮಾಡಿದ ಗಾಂಧಿ ಹಾಗೂ ಒಂದು ಬೊಗಸೆ ನೀರಿಗಾಗಿ ಡಾ.ಅಂಬೇಡ್ಕರ್ ರ ಹೋರಾಟ ಬಹಳ ಮುಖ್ಯವಾದುದು ಎಂದು ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಪಾಲಿ ಮತ್ತು ಭೌದ್ದ ಅಧ್ಯಯನ ಸಂಸ್ಥೆಯ ಪ್ರೊ.ಎಚ್.ಟಿ.ಪೋತೆ ಸ್ವಾಗತಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶ ಜನಮುಖಿ ಪರಂಪರೆ ಹೊಂದಿದೆ. ಶರಣ, ಸೂಫಿ, ಬೌದ್ಧ, ಪರಂಪರೆ ಹಾಗೂ ಇತಿಹಾಸವುಳ್ಳ ಈ ಭಾಗದ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕವಿ ಸಾಹಿತಿ ಲೇಖಕರು ಜನಸ್ನೇಹಿ ಮಾತ್ರ ಆಗಿರದೇ ಜನಪರ ಮತ್ತು ಜೀವಪರ ಆಗಿರಬೇಕು ಎಂದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ರಾಮುಲು ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಹಾಗೂ ಕುಲಸಚಿವರಾದ ಪ್ರೊ.ರಮೇಶ ಲಂಡನಕರ್ ಹಾಗೂ ಪ್ರೊ.ಮೇಧಾವಿನಿ ಕಟ್ಟಿ ವೇದಿಕೆಯಲ್ಲಿದ್ದರು. ಕನ್ನಡ ಅಧ್ಯಯನ ಸಂಸ್ಥೆ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ಸುನೀಲ ಜಾಬಾದಿ ನಿರೂಪಿಸಿದರು. ಡಾ.ಶಿವಶರಣಪ್ಪ ಕೋಡ್ಲಿ ವಂದಿಸಿದರು.
ಕರ್ನಾಟಕ ಚಿಂತನಾ ಪರಂಪರೆಗಳ ಮತ್ತು ಕನ್ನಡ ಸಾಹಿತ್ಯ : ವಿ
ಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಮೀನಾಕ್ಷಿ ಬಾಳಿ ಮಾತನಾಡಿ, ಕರ್ನಾಟಕ ಚಿಂತನ ಪರಂಪರೆ ಕುರಿತು ಇಡಿ ಜಗತ್ತಿನ ಕ್ಷೇಮ ಆಗು ಹೋಗುವ ಕುರಿತು ಕನ್ನಡ ಸಾಹಿತ್ಯದಲ್ಲಿ ಪ್ರಥಮ ಬಾರಿ ಕಾವಿರಾಜ ಮಾರ್ಗದ ಮೂಲಕ ಸಾಹಿತ್ಯ ಕುರಿತು ತಿಳಿದುಕೊಳ್ಳಲು ಸಹಾಯಕವಾಯಿತು ಎಂದರು.
ಕೆ ರವೀಂದ್ರನಾಥ ಮಾತನಾಡಿ, ಹಸ್ತ ಪ್ರತಿಗಳಲ್ಲಿ ಕಲ್ಯಾಣ ಕರ್ನಾಟಕದ ಚಿಂತನ ಪರಂಪರೆ ಮಹಾತ್ವ ನೆಲೆಯಾಗಿದೆ ಈ ಭಾಗದ ವಡ್ಡರಾಧನೆ ಗದ್ಯ ಸಾಹಿತ್ಯಗಳನ್ನು ಮೊಟ್ಟ ಮೊದಲ ಕವಿರಾಜ ಮಾರ್ಗ ಕನ್ನಡ ಮಹತ್ವವನ್ನು ತಿಳಿಸಿದ್ದೇನೆ. ಭಾರತೀಯ ಸಮಾಜದ ನೆಲಯನ್ನು ಹುಟ್ಟುಹಾಕಿದೆ ಈ ಭಾಗ ತತ್ವ ಪದಕರರ ನೆಲೆಯಾಗಿದೆ ಎಂದರು.
ಪಿ.ನಂದಕುಮಾರ ವಿದ್ಯಾರ್ಥಿಗಳೊಂದಿಗೆ ಹಾಗೂ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.







