ಜಾನಪದ ಲೋಕ ಪ್ರಶಸ್ತಿಗೆ ಕಲಬುರಗಿಯಿಂದ ಇಬ್ಬರು ಆಯ್ಕೆ

ಎ.ಕೆ.ರಾಮೇಶ್ವರ, ಬಸಮ್ಮ
ಕಲಬುರಗಿ : ಕರ್ನಾಟಕ ಜಾನಪದ ಪರಿಷತ್ತನಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ 2025ನೇ ಸಾಲಿನ ಜಾನಪದ ಲೋಕ ಗೌರವ ಪ್ರಶಸ್ತಿಗೆ ಮಕ್ಕಳ ಸಾಹಿತಿ, ಜಾನಪದ ತಜ್ಞ ಎ.ಕೆ.ರಾಮೇಶ್ವರ ಹಾಗೂ ಚಿತ್ತಾಪೂರ ತಾಲೂಕಿನ ರಾಮತೀರ್ಥ ಗ್ರಾಮದ ಬಸಮ್ಮ ಅವರನ್ನು ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ ಫೆ.8 ಮತ್ತು 9 ರಂದು ಎರಡು ದಿನಗಳ ಕಾಲ ನಡೆಯುವ ಮಹಿಳಾ ಜಾನಪದ ಲೋಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದಿದ್ದಾರೆ.
ಜಾನಪದ ಲೋಕ ಗೌರವ ಪ್ರಶಸ್ತಿಯು ಹತ್ತು ಸಾವಿರ ರೂ., ನೆನಪಿನ ಕಾಣಿಕೆ ಹಾಗೂ ಶಾಲು ಸನ್ಮಾನವಿದೆ, ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಗೆ ಹದಿನೈದು ಸಾವಿರ ರೂ., ನೆನಪಿನ ಕಾಣಿಕೆ ಮತ್ತು ಶಾಲು ಸನ್ಮಾನವಿದೆ ಎಂದು ತಿಳಿಸಿದ್ದಾರೆ.
ಕಲಬುರಗಿಯಿಂದ ಇಬ್ಬರು ಆಯ್ಕೆಯಾಗಿರುವ ನಿಮಿತ್ತ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿ ಪಾಟೀಲ, ಚಿತ್ತಾಪೂರ ತಾಲೂಕಿನ ಅಧ್ಯಕ್ಷ ನಾಗಯ್ಯಸ್ವಾಮಿ ಅಲ್ಲೂರ ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ ಎಂದು ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಪಿ.ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







