ಯುಎಸ್–ಭಾರತ ವ್ಯಾಪಾರ ಒಪ್ಪಂದ| ಬಿಜೆಪಿ ಸರಕಾರದ ಶರಣಾಗತಿ: ಸಿಪಿಐ(ಎಂ) ತೀವ್ರ ಟೀಕೆ

ಕಲಬುರಗಿ: ಭಾರತ–ಅಮೆರಿಕ ನಡುವೆ ನಡೆಯುತ್ತಿರುವ ತಥಾಕಥಿತ ‘ಮಧ್ಯಂತರ ವ್ಯಾಪಾರ ಒಪ್ಪಂದ’ದ ವಿವರಗಳು ನಿಧಾನವಾಗಿ ಬಹಿರಂಗಗೊಳ್ಳುತ್ತಿದ್ದು, ಈ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಮೆರಿಕದ ಎದುರು ಶರಣಾಗಿರುವುದು ಸ್ಪಷ್ಟವಾಗುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿಕೊಂಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಸಿಪಿಐ(ಎಂ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಅಮೆರಿಕದಿಂದ ಆಮದು ಆಗುವ ಹಣ್ಣುಗಳು, ಹತ್ತಿ, ಮರದ ಕಾಯಿ ಉತ್ಪನ್ನಗಳು, ಸೋಯಾಬೀನ್ ಎಣ್ಣೆ ಸೇರಿದಂತೆ ಹಲವು ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲೆ ಭಾರತ ಸರ್ಕಾರ ಶೂನ್ಯ ಸುಂಕ ವಿಧಿಸಲು ಒಪ್ಪಿಕೊಂಡಿದೆ. ಈ ನಿರ್ಧಾರವು ದೇಶದಾದ್ಯಂತ ಲಕ್ಷಾಂತರ ಸೇಬು ಬೆಳೆಗಾರರು, ಹತ್ತಿ ಹಾಗೂ ಸೋಯಾ ರೈತರ ಜೀವನೋಪಾಯಕ್ಕೆ ಗಂಭೀರ ಹೊಡೆತ ನೀಡಲಿದೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶ, ಜಮ್ಮು–ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳ ಸೇಬು ಬೆಳೆಗಾರರು ಈಗಾಗಲೇ ನ್ಯೂಜಿಲ್ಯಾಂಡ್ ಮೊದಲಾದ ದೇಶಗಳೊಂದಿಗೆ ಮಾಡಲಾದ ಹಿಂದಿನ ವ್ಯಾಪಾರ ಒಪ್ಪಂದಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಮೆರಿಕದೊಂದಿಗೆ ಹೊಸ ಒಪ್ಪಂದವು ಅವರ ಬದುಕನ್ನು ಮತ್ತಷ್ಟು ನಾಶಗೊಳಿಸುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕೇತರ ಅಡೆತಡೆಗಳನ್ನು (ನಾನ್-ಟಾರಿಫ್ ಬ್ಯಾರಿಯರ್ಸ್) ತೆಗೆದುಹಾಕಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ ಎಂಬ ವರದಿಗಳು ಆತಂಕಕಾರಿ. ಇದರ ಪರಿಣಾಮವಾಗಿ ಭಾರತೀಯ ರೈತರಿಗೆ ನೀಡಲಾಗುತ್ತಿರುವ ಬೆಂಬಲ ಮತ್ತು ಸಬ್ಸಿಡಿಗಳನ್ನು ಹಿಂಪಡೆಯುವ ಪರಿಸ್ಥಿತಿ ಉಂಟಾಗಲಿದೆ. ಇದರಿಂದ ಭಾರೀ ಸಬ್ಸಿಡಿಗಳನ್ನು ಪಡೆಯುತ್ತಿರುವ ಅಮೆರಿಕದ ಕೃಷಿ ಉತ್ಪನ್ನಗಳೊಂದಿಗೆ ಭಾರತೀಯ ರೈತರು ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಹೇಳಿದರು.
ರಷ್ಯಾದಿಂದ ತೈಲ ಖರೀದಿಸುವುದು ಸೇರಿದಂತೆ ಭಾರತದ ವಿದೇಶಾಂಗ ಹಾಗೂ ಆರ್ಥಿಕ ಧೋರಣೆಗಳ ಬಗ್ಗೆ ಅಮೆರಿಕ ನಿರ್ದೇಶನ ನೀಡುವಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಕಾರ್ಯಕಾರಿ ಆದೇಶವು ಈ ನಿರ್ದೇಶನಗಳ ಅನುಷ್ಠಾನಕ್ಕೆ ವ್ಯವಸ್ಥೆ ಮಾಡಿದ್ದು, ಉಲ್ಲಂಘನೆಯಾದರೆ ಸುಂಕ ಹೇರುವ ಬೆದರಿಕೆಯನ್ನು ಒಡ್ಡಲಾಗಿದೆ. ಇದು ಬಿಜೆಪಿ ನೇತೃತ್ವದ ಸರಕಾರದ ಲಜ್ಜಾಸ್ಪದ ಶರಣಾಗತಿಯಾಗಿದೆ ಎಂದು ಆರೋಪಿಸಿದ್ದಾರೆ.
ಈ ವ್ಯಾಪಾರ ಒಪ್ಪಂದದ ಸಂಪೂರ್ಣ ವಿವರಗಳನ್ನು ತಕ್ಷಣವೇ ಸಂಸತ್ತಿನ ಮುಂದೆ ಮಂಡಿಸಿ ಸಾರ್ವಜನಿಕಗೊಳಿಸಬೇಕು, ಭಾರತೀಯ ಕಾರ್ಮಿಕರು, ರೈತರು ಹಾಗೂ ಸಾಮಾನ್ಯ ಜನರ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದನ್ನು ಕೇಂದ್ರ ಸರ್ಕಾರ ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.






