Wadi | ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಣೆ ಶ್ಲಾಘನೀಯ : ಡಾ.ಗುರುಮೂರ್ತಿ ಶಿವಾಚಾರ್ಯ

ವಾಡಿ: ಹಲಕರ್ಟಿ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯ ಅವರದ್ದು ಪರರ ಸುಖಕ್ಕಾಗಿ ಮಿಡಿಯುವ ಮನಸ್ಸಾಗಿದ್ದು, ಅದರಿಂದಲೇ ಸಮಾಜಮುಖಿ ಕಾರ್ಯಗಳ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪಾಳಾ ಹಿರೇಮಠ ಸಂಸ್ಥಾನ ಮಠದ ಡಾ. ಗುರುಮೂರ್ತಿ ಶಿವಾಚಾರ್ಯ ಹೇಳಿದರು.
ಕಟ್ಟಿಮನಿ ಹಿರೇಮಠದಲ್ಲಿ ಮುನೀಂದ್ರ ಶಿವಾಚಾರ್ಯರ 46ನೇ ಜನ್ಮದಿನ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಹುಟ್ಟುಹಬ್ಬದ ನೆಪದಲ್ಲಿ ಯುವಜನರು ದಾರಿ ತಪ್ಪುತ್ತಿರುವ ಇಂದಿನ ದಿನಮಾನಗಳಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ಥಕತೆ ಮೆರೆದಿರುವುದು ಹೃದಯವಂತರಿಗೆ ಮಾತ್ರ ಸಾಧ್ಯ. ಅದನ್ನು ಮುನೀಂದ್ರ ಶಿವಾಚಾರ್ಯ ಅವರು ಮಾಡಿ ತೋರಿಸಿದ್ದು, ಅವರ ಹೃದಯ ವೈಶಾಲ್ಯತೆ ಮತ್ತು ಸಮಾಜದ ಮೇಲಿನ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಕೊಂಡಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುನೀಂದ್ರ ಶಿವಾಚಾರ್ಯ, “ನನ್ನನ್ನು ಗುರುವಾಗಿ ಸ್ವೀಕರಿಸಿ ತಮ್ಮ ಹೃದಯದಲ್ಲಿ ಸ್ಥಾನ ನೀಡಿದ ಭಕ್ತರ ಸೇವೆ ಮಾಡುವುದೇ ನನ್ನ ಜೀವನದ ಪರಮೋದ್ದೇಶ. ಅದೇ ದಾರಿಯಲ್ಲಿ ಸಾಗುತ್ತಿದ್ದೇನೆ” ಎಂದು ಹೇಳಿದರು.
ಮಠದ ಅಭಿವೃದ್ಧಿಗಾಗಿ ತಮ್ಮ ತನು-ಮನ-ಧನದಿಂದ ಶ್ರಮಿಸುತ್ತಿರುವ ಸಮಸ್ತ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಇದಕ್ಕೂ ಮೊದಲು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಹಾಗೂ ಹತ್ತನೇ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕಲಬುರಗಿಯ ಶ್ರೀ ಬಸವೇಶ್ವರ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣೆ ಜರುಗಿತು. ಮುನೀಂದ್ರ ಶಿವಾಚಾರ್ಯರ ಕುರಿತು 'ಅಭಿನವ ಚರಿತ್ರೆ' ಸಾಕ್ಷ ಚಿತ್ರ ಬಿಡುಗಡೆ ಮಾಡಲಾಯಿತು. ತುಕಾರಾಮ ಅವರಿಂದ ಹಾಸ್ಯ ಜಾದೂ ಪ್ರದರ್ಶನ ನಡೆಯಿತು.
ಯಶವಂತ ಬಡಿಗೇರ ಸಿಂದಗಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಮಲ್ಲು ಮಾಸ್ಟರ್ ಭಜಂತ್ರಿ ಹಾಗೂ ರಾಜಶೇಖರ ಕಟ್ಟಿಸಂಗಾವಿ ವಾದ್ಯ ಸಾಥ್ ನೀಡಿದರು. ಮಹಾದೇವಯ್ಯ ಸ್ವಾಮಿ, ಶಾಂತಯ್ಯ ಸ್ವಾಮಿ ಅವರಿಂದ ಮತ್ತು ಲಾಡ್ಲಾಪುರ ಕರಿಬಸವೇಶ್ವರ ದೇವಸ್ಥಾನ ಭಕ್ತರಿಂದ ನಾಣ್ಯಗಳ ತುಲಾಭಾರ ಜರುಗಿತು. ಭಾರತೀಯ ಸಂಗೀತ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ಭರತನಾಟ್ಯ ಜರುಗಿತು.
ಸನ್ನಿಧಾನವನ್ನು ಕಲಕೇರಿಯ ಸಿದ್ದರಾಮ ಶಿವಾಚಾರ್ಯರು, ದಂಡಗುಂಡದ ಸಂಗನಬಸವ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಜೇರಟಗಿಯ ಮಡಿವಾಳಯ್ಯ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ಥಳೀಯ ಹಲಕರ್ಟಿ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.






