ವಾಡಿ | ಅ.5ರಿಂದ ಧಮ್ಮಯಾತ್ರೆ; ನ.1ರಂದು ಸನ್ನತ್ತಿಯಲ್ಲಿ 70ನೇ ಬೃಹತ್ ಧಮ್ಮದೀಕ್ಷಾ ಸಮಾರಂಭ

ವಾಡಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸುವ ಮೂಲಕ ಪ್ರಬುದ್ಧ ಭಾರತ ನಿರ್ಮಾಣ ಮಾಡುವ ಉದ್ದೇಶದಿಂದ ಅಕ್ಟೋಬರ್ 5ರಿಂದ ಧಮ್ಮಯಾತ್ರೆ ಆರಂಭವಾಗಿ, ನವೆಂಬರ್ 1ರಂದು ಸನ್ನತ್ತಿ (ಕನಗನಹಳ್ಳಿ)ಯಲ್ಲಿ ಬೃಹತ್ ಧಮ್ಮದೀಕ್ಷಾ ಸಮಾರಂಭ ನಡೆಯಲಿದೆ ಎಂದು ಸನ್ನತ್ತಿ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಹಾಗೂ ಸಂರಕ್ಷಣಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂದೀಪ ಕಟ್ಟಿ ತಿಳಿಸಿದರು.
ಪೂಜ್ಯ ಝೆನ್ ಗುರು ಭಂತೆ ಶಕು ಬೋಧಿಧಮ್ಮ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ, ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಮತ್ತು ಸನ್ನತ್ತಿ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಹಾಗೂ ಸಂರಕ್ಷಣಾ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 1ರಂದು ನಡೆಯಲಿರುವ 70ನೇ ಧಮ್ಮದೀಕ್ಷಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಕ್ಟೋಬರ್ 5ರಂದು ಕಲಬುರಗಿಯ ಜಗತ್ ವೃತ್ತದಿಂದ ಆರಂಭವಾಗುವ ಧಮ್ಮಯಾತ್ರೆ ನವೆಂಬರ್ 1ರಂದು ಸನ್ನತ್ತಿಯಲ್ಲಿ ಸಮಾರೋಪಗೊಳ್ಳಲಿದೆ. ಈ ಯಾತ್ರೆಯ ಮೂಲಕ ಕರ್ನಾಟಕದಾದ್ಯಂತ ಸುಮಾರು 5 ಲಕ್ಷ ಜನರನ್ನು ಧಮ್ಮದೀಕ್ಷೆ ಸ್ವೀಕರಿಸಲು ಸಜ್ಜುಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಶಿಸ್ತುಬದ್ಧ ಹಾಗೂ ಯೋಜನಾಬದ್ಧವಾಗಿ ಯಶಸ್ವಿಗೊಳಿಸಲು ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಿಕೆ ಮಾಡುವ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಸಾಯಬಣ್ಣ ಬನ್ನಟ್ಟಿ, ಇದು ಸಂಪೂರ್ಣ ರಾಜಕೀಯೇತರ ಕಾರ್ಯಕ್ರಮವಾಗಿದ್ದು, ದಲಿತ ಸಮುದಾಯದ ಪ್ರತಿಯೊಂದು ಮನೆಗೂ ಧಮ್ಮದೀಕ್ಷಾ ಕಾರ್ಯಕ್ರಮದ ಮಾಹಿತಿ ತಲುಪಿಸಬೇಕು. ಪ್ರತಿಯೊಬ್ಬ ಅಂಬೇಡ್ಕರ್ವಾದಿ ಹಾಗೂ ಬೌದ್ಧ ಅನುಯಾಯಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸಂಘಟಕರು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶರಬಣ್ಣ ಸನ್ನತ್ತಿ, ರಣಧೀರ ಹೊಸಮನಿ, ರಾಯಪ್ಪ ಹುಳಂಡಿಗೇರ, ಶಿವಲಿಂಗಪ್ಪ, ಭೀಮಶಂಕರ್ ತೇಲ್ಕರ್, ಜೈಭೀಮ್ ಮಾರಡಗಿ, ಶಿವಕುಮಾರ ಬಂದಳ್ಳಿ, ಸಿದ್ದಣ್ಣ ಬೆಳಗೇರಿ, ಶಿವಯೋಗಿ ಬಳಗ, ಶಿವಕುಮಾರ ಕುಲಕುಂದ, ಮಂಜುನಾಥ ಹೊನಗುಂಟ, ನಾಗರಾಜ ಸೋಗುರು, ಅಂಬರೀಶ ಹಣಕೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






