ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಶೂನ್ಯ : ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಸೇಡಂ : ಹಳೆ ಮೈಸೂರು ಭಾಗಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಈ ಭಾಗದ ಅಭಿವೃದ್ಧಿ ಆಗಿಲ್ಲ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಜನರೊಂದಿಗೆ ಜನತಾದಳದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಕೆಆರ್ಡಿಬಿ ಮಂಡಳಿಗೆ ಪ್ರತಿವರ್ಷ ₹5 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದ್ದರೂ ಯಾವುದೇ ಸ್ಪಷ್ಟ ಪ್ರಗತಿ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಕಲಬುರಗಿ ಸೇರಿದಂತೆ ಹಲವು ನಗರಗಳ ರಸ್ತೆಗಳು ಗುಂಡಿಮಯವಾಗಿವೆ. ರಸ್ತೆ ದುರಸ್ತಿ ಮಾಡಲು ಹಣವಿಲ್ಲವೇ? ಸಾವಿರಾರು ಕೋಟಿ ರೂಪಾಯಿ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 18 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಎಸೆಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದೆ ರಾಜಕಾರಣಿಗಳು ಕೇವಲ ಭಾಷಣಗಳಿಗೆ ಸೀಮಿತರಾಗಿದ್ದಾರೆ ಎಂದು ಟೀಕಿಸಿದರು.
ಆಂಧ್ರ ಪ್ರದೇಶದ ಸ್ಟೀಲ್ ಫ್ಯಾಕ್ಟರಿಗೆ ಮರುಜೀವ ನೀಡಿದಂತೆ ಸೇಡಂನ ಸಿಸಿಐ ಕಾರ್ಖಾನೆಯನ್ನು ಪುನರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಹೇಳಿದರು.
ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಭೀಮಾ ನದಿ ನೀರಾವರಿ ಯೋಜನೆ ಮೂಲಕ ನೀರು ಒದಗಿಸಿದ್ದರು. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಎರಡು ಅವಧಿಗಳಲ್ಲೂ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ನೆನಪಿಸಿದರು.
ಸಚಿವ ಡಾ. ಶರಣಪ್ರಕಾಶ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್, ಹಲವು ಬಾರಿ ಶಾಸಕರಾಗಿ, ಸಚಿವರಾಗಿದ್ದರೂ ಕ್ಷೇತ್ರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿಲ್ಲ. ಸಿಮೆಂಟ್ ಕಾರ್ಖಾನೆಗಳಿದ್ದರೂ ಸ್ಥಳೀಯರಿಗೆ ಉದ್ಯೋಗ ಸಿಗದೆ ವಲಸೆ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಸರ್ಕಾರ ಬಂದರೆ ಸ್ಥಳೀಯರಿಗೆ ಖಾಸಗಿ ಕಾರ್ಖಾನೆಗಳಲ್ಲಿ ಶೇ.50ರಷ್ಟು ಉದ್ಯೋಗ ಮೀಸಲು ನೀಡುವ ಕಾನೂನು ತರಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಮಾತನಾಡಿ, ರೈತರು, ಬಡವರು ಹಾಗೂ ಯುವಕರ ಪರವಾಗಿ ಧ್ವನಿ ಎತ್ತುತ್ತಿರುವ ನಾಯಕ ಎಚ್.ಡಿ. ಕುಮಾರಸ್ವಾಮಿ ಎಂದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಬಿ.ಎಂ. ಕೃಷ್ಣಾರೆಡ್ಡಿ ಹಾಗೂ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಶಾಶ್ವತ ಪ್ರಯೋಜನ ನೀಡುತ್ತಿಲ್ಲ. ಅವು ಕೇವಲ ಪ್ರಚಾರದ ತಂತ್ರಗಳಾಗಿವೆ ಎಂದು ಟೀಕಿಸಿದರು.
ಈ ವೇಳೆಯಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸೂರಜ್ ಸೊನಿ ನಾಯಕ, ನಾಸೀರ್ ಹುಸೇನ್, ಕೃಷ್ಣಾರೆಡ್ಡಿ, ಶಿವಕುಮಾರ ನಾಟೀಕರ್, ಮಹೇಶ್ವರಿ ವಾಲಿ, ಜಗನ್ನಾಥರೆಡ್ಡಿ ಗೋಟೂರ್, ಬಸವರಾಜ ಬೀರಬಿಟ್ಟಿ, ಗುರುರಾಜ ಹುಣಸಿಮರದ, ದೇವೆಗೌಡ ತೆಲ್ಕೂರ, ರಾಜಕುಮಾರ ಬಡದಾಳ, ಚಾಂದಪಾಶ ಬುರುಗಪಲ್ಲಿ, ಪ್ರವೀಣ ಜಾಧವ, ಹಸನಪ್ಪ ಮೇತ್ರಿ, ಗೀತಾ,ಪಲ್ಲವಿ ಗುತ್ತೇದಾರ, ಶಂಭುಲಿoಗ ನಾಟೀಕರ್, ಶಿವಪುತ್ರಪ್ಪ ಮೊಘ ಸೇರಿದಂತೆ ಅನೇಕರಿದ್ದರು.
ಜಗನ್ನಾಥ ತರನಳ್ಳಿ ನಿರೂಪಿಸಿ ವಂದಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ ಗಾಡದಾನಾ ಪ್ರಾಸ್ತವಿಕ ಮಾತನಾಡಿದರು.






