ಆರೋಗ್ಯದ ದೃಷ್ಟಿಯಲ್ಲಿ ಸಿರಿಧಾನ್ಯಗಳ ಪಾತ್ರ ದೊಡ್ಡದು: ದೇವಿಕಾ ಆರ್.
'ಸಿರಿಧಾನ್ಯಗಳ ಮೌಲ್ಯವರ್ಧನೆ, ಸಂಸ್ಕರಣೆ' ಕುರಿತು ತರಬೇತಿ ಕಾರ್ಯಗಾರ

ಕಲಬುರಗಿ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ)-ಬೆಂಗಳೂರು, ಕೆ.ಎಸ್.ಸಿ.ಎಸ್.ಟಿ ಪ್ರಾದೇಶಿಕ ಕೇಂದ್ರ ಕಲಬುರಗಿ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ (ಡಿ.ಎ.ಟಿ.ಸಿ.) ಕೋಟನೂರ-ಕಲಬುರಗಿ, ರವರ ಸಹಯೋಗದಲ್ಲಿ ನಗರದ ಕೃಷಿ ಕೇಂದ್ರದಲ್ಲಿ "ಸಿರಿಧಾನ್ಯಗಳ ಮೌಲ್ಯವರ್ಧನೆ ಹಾಗೂ ಸಂಸ್ಕರಣೆ” ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಗಾರವನ್ನು ಉದ್ಘಾಟಿಸಿದ ಕಲಬುರಗಿಯ ಜಾಗೃತಕೋಶದ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್. ಮಾತನಾಡಿ, ಆರೋಗ್ಯದ ದೃಷ್ಟಿಯಲ್ಲಿ ಸಿರಿಧಾನ್ಯಗಳ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚು ಮಾಡಬೇಕೆಂದು ಹೇಳಿದರು.
ಸಿರಿಧಾನ್ಯಗಳನ್ನು ಕಡಿಮೆ ಖರ್ಚಿನಲ್ಲಿ ರಸಗೊಬ್ಬರ ಮತ್ತು ಕೀಟನಾಶಗಳ ಬಳಕೆ ಇಲ್ಲದೆ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಅಚ್ಚುಕಟ್ಟಾಗಿ ಬೆಳೆಯಬಹುದು ಎಂದರು.
ಕೆ.ಎಸ್.ಸಿ.ಎಸ್.ಟಿ.ಯ ಯೋಜನಾ ಅಭಿಯಂತರರಾದ ಡಾ.ಸೈಯದ್ ಸಮೀರ್ ಅವರು ಪ್ರಾಸ್ತಾವಿಕ ಮಾತನಾಡಿ, 'ಸಿರಿಧಾನ್ಯಗಳ ಮೌಲ್ಯವರ್ಧನೆ ಹಾಗೂ ಸಂಸ್ಕರಣೆ' ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಈಗಿನ ಹೊಸ ಜೀವನಶೈಲಿಯಲ್ಲಿ ಸಿರಿಧಾನ್ಯಗಳ ಸೇವನೆ, ಆರೋಗ್ಯದ ಲಾಭಗಳು ಮತ್ತು ಸಿರಿಧಾನ್ಯಗಳಲ್ಲಿ ಅಡಗಿರುವ ವಿವಿಧ ಪೋಷಕಾಂಶಗಳನ್ನು ತಿಳಿಸಿದರು. ಈ ಕಾಲಘಟ್ಟಕ್ಕೆ ಸಿರಿಧಾನ್ಯಗಳು ರೋಗ ರಹಿತ ಪೌಷ್ಟಿಕ ಆಹಾರ ಎಂದರು.
ಸಿರಿಧಾನ್ಯಗಳ ಬಗ್ಗೆ ಇನ್ನೂ ಹೆಚ್ಚು ಹೆಚ್ಚಾಗಿ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಿರಿಧಾನ್ಯಗಳ ಬಳಕೆ, ಮೌಲ್ಯವರ್ಧನೆ ಮತ್ತು ಸಂಸ್ಕರಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಅಲ್ಲದೆ, ಇದು ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಡಾ.ಅನಿಲ್ ಕುಮಾರ್ ರಾಥೋಡ್ ಮಾತನಾಡಿ, ಆರೋಗ್ಯವನ್ನು ಸುಧಾರಿಸಿಕೊಳ್ಳಲು ದಿನನಿತ್ಯದ ಆಹಾರ ಪದ್ಧತಿಯನ್ನು ಸುಧಾರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಡಾ. ಸೈಯದ್ ಸಮೀರ್, ಡಾ. ಅಂಬರೀಶ್ ಗಣಚಾರಿ ಮತ್ತು ಸಂತೋಷ್ ಜವಳಿ ಅವರು ತಮ್ಮ ಪರಿಣಿತ ಉಪನ್ಯಾಸಗಳ ಮೂಲಕ ರೈತ ಮಹಿಳೆಯರಿಗೆ ಅವಶ್ಯಕ ಮಾಹಿತಿ ಒದಗಿಸಿದರು.
ಕಾರ್ಯಕ್ರಮವನ್ನು ಮಧುಮತಿ ಪಾಟೀಲ್ ನಿರೂಪಿಸಿದರು. ನೀಲಕ್ಕ ಎಂ. ನರಸಲಗಿ ವಂದಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ರೈತ ಮಹಿಳೆಯರು ತಮ್ಮ ಅನುಭವ ಹಂಚಿಕೊಳ್ಳುತ್ತ, ಇಂತಹ ತರಬೇತಿ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಯಾಸ್ಮಿನ್, ಸುಜಾತ ರಾಜನಾಳಕರ ಮತ್ತು ಕೆ.ಎಸ್.ಸಿ.ಎಸ್.ಟಿ ಪ್ರಾದೇಶಿಕ ಕೇಂದ್ರ ಕಲಬುರಗಿಯ ಯೋಜನಾ ಸಂಯೋಜಕರಾದ ವಿಶ್ವ ಪ್ರಸನ್ನ ಸೇರಿದಂತೆ ಸಹಾಯಕ ಸಿಬ್ಬಂದಿ ಮತ್ತಿತರರು ಹಾಜರಿದ್ದರು.