ಯಡ್ರಾಮಿ | ವಿಜೃಂಭಣೆಯ ಕುಳಗೇರಿಯ ಶ್ರೀ ಬೆಣ್ಣೆ ಬಸವೇಶ್ವರ ರಥೋತ್ಸವ

ಯಡ್ರಾಮಿ: ಜಾತ್ರೆ, ಹಬ್ಬಗಳ ಆಚರಣೆಯಿಂದ ಸಾಮಾಜಿಕ ಸೌಹಾರ್ದತೆ ಸಾಧ್ಯವಾಗುತ್ತದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತುಂಜಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ತಾಲೂಕಿನ ಕುಳಗೇರಿ ಗ್ರಾಮದಲ್ಲಿ ಸೋಮವಾರ ಸಂಜೆ ಶ್ರೀ ಬೆಣ್ಣೆ ಬಸವೇಶ್ವರ ರಥೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಜಾತ್ರೆಗಳಲ್ಲಿ ಜಾತಿ ತಾರತಮ್ಯ ಕಾಣುವುದಿಲ್ಲ. ತಿಂಡಿ, ತೆಂಗು, ಹೂವು, ಹಣ್ಣು ಹಾಗೂ ಬಳೆ ಮಾರಾಟ ಮಾಡುವ ವ್ಯಕ್ತಿ ಯಾವ ಜಾತಿ, ಧರ್ಮದವರು ಎಂದು ಕೇಳಿ ಭಕ್ತರು ಖರೀದಿಸುವುದಿಲ್ಲ. ಕೇವಲ ಶ್ರದ್ಧೆ, ಭಕ್ತಿಯಿಂದ ಜಾತ್ರೆ ಉತ್ಸವ ಹಬ್ಬಗಳನ್ನು ಆಚರಿಸುತ್ತಾರೆ. ಆದ್ದರಿಂದ ಜಾತ್ರೆ, ಉತ್ಸವ, ಹಬ್ಬಗಳು ನಮ್ಮ ದೇಶದ ಸಾಮಾಜಿಕ ಸೌಹಾರ್ದತೆ ಕಾಪಾಡಲು ಸಹಕಾರಿಯಾಗಿವೆ ಎಂದು ಹೇಳಿದರು.
ಘನ ಸಾನಿಧ್ಯವಹಿಸಿದ ಸೊನ್ನ ವಿರಕ್ತಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮಾತನಾಡಿ, ಶ್ರೀ ಬೆಣ್ಣೆ ಬಸವೇಶ್ವರ ಹೊಸ ರಥ ನೋಡುವ ಸೌಭಾಗ್ಯ ನಮ್ಮದಾಗಿದೆ. ಹಬ್ಬಹರಿದಿನಗಳು ಮನುಷ್ಯನ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಕಾಯಕದ ಮೂಲಕ ದೇಹ ದಂಡಿಸುವ ಮೂಲಕ ನಿದ್ದೆ ಮಾಡಬೇಕು. ಪರೋಪಕಾರಿಯಾಗಿ ಬಾಳಬೇಕು ಎಂದರು.
ಭವ್ಯ ರಥೋತ್ಸವ :
ಕುಳಗೇರಿ ಗ್ರಾಮದಲ್ಲಿ ಸೋಮವಾರ ಸಂಜೆ ಶ್ರೀ ಬೆಣ್ಣೆ ಬಸವೇಶ್ವರ ರಥೋತ್ಸವ ಅಪಾರ ಭಕ್ತ ಸಮೂಹದ ನಡುವೆ ವಿಜಂಭಣೆಯಿಂದ ನಡೆಯಿತು.
ರಥದಲ್ಲಿ ದೇವರನ್ನು ಕೂರಿಸಿ ಪೂಜೆ ಸಲ್ಲಿಸಿ, ತೇರಿನ ಗಾಲಿಗೆ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದ ಭಕ್ತರು ಜೈಕಾರ ಹಾಕಿದರು. ಡೊಳ್ಳು, ಜಾಂಜ್ ಮೇಳ, ಭಜನೆ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿದವು. ಭಕ್ತರು ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಭಕ್ತರು ರಥದ ಮೇಲೆ ಬಾಳೆಹಣ್ಣು ಎಸೆದು ಕೈಮುಗಿದು ಭಕ್ತಿ ಸಮರ್ಪಿಸಿದರು.
ರಥೋತ್ಸವ ನಡೆಯುವ ದಾರಿಯಲ್ಲಿ ಧೂಳು ಅಡಗಿಸಲು ರಸ್ತೆ ಮೇಲೆ ನೀರು ಚಿಮುಕಿಸಲಾಗಿತ್ತು. ದೇವಾಲಯಕ್ಕೆ ತೆರಳಿದ ಭಕ್ತರು ದೇವರಿಗೆ ಹಣ್ಣುಕಾಯಿ, ಕರ್ಪೂರ, ಊದಬತ್ತಿ ಅರ್ಪಿಸಿ ಭಕ್ತಿ ಸರ್ಪಿಸಿದರು. ಬಿರಾಳ, ಮಳ್ಳಿ, ನಾಗರಹಳ್ಳಿ, ಅಲ್ಲಾಪುರ, ಮಾಗಣಗೇರಿ, ಯಾಳಗಿ, ಕಾಚಾಪುರ, ದುಮ್ಮದ್ರಿ ಮತ್ತಿತರೆ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.







