Yedrami | ರಾಸಾಯನಿಕ ಗೊಬ್ಬರದಿಂದ ಮಣ್ಣಿನಲ್ಲಿರುವ ಫಲವತ್ತತೆ ನಾಶ : ಕಣ್ಹೇರಿ ಶ್ರೀ

ಯಡ್ರಾಮಿ: ರೈತರು ಇತ್ತೀಚಿನ ದಿನಗಳಲ್ಲಿ ಅತಿಯಾದ ಆಸೆಯಿಂದ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿರುವ ಫಲವತ್ತತೆ ನಾಶವಾಗಿ ಇಳುವರಿ ಕಡಿಮೆಯಾಗುತ್ತಿದೆ ಎಂದು ಕಣ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಸೋಮವಾರ ನಡೆದ ರಾಜ್ಯ ಮಟ್ಟದ ರೈತ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದರ ಬದಲಾಗಿ ರೈತರು ಸ್ವತಃ ಮನೆಗಳಲ್ಲಿರುವ ಎತ್ತು, ಹಸುಗಳಿಂದ ಬರುವ ಸಗಣಿ ಬಳಸಿ ಗೊಬ್ಬರ ತಯಾರಿಸಬೇಕು ಎಂದರು.
ಇದನ್ನು ಹೊಲಗಳಿಗೆ ಹಾಕುವುದರಿಂದ ಭೂಮಿ ಫಲವತ್ತತೆ ಹೆಚ್ಚಾಗಿ ಉತ್ತಮ ಇಳುವರಿ ಬರುತ್ತದೆ. ಕಲಬುರಗಿ ಭಾಗದಲ್ಲಿ ಗಿಡಗಳ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿ ಬೆಳೆಗಳು ಸರಿಯಾಗಿ ಬೆಳೆಯುತ್ತಿಲ್ಲ. ಹೀಗಾಗಿ ರೈತರು ಮೊದಲು ಗಿಡ-ಮರಗಳ ಸಂಖ್ಯೆ ಹೆಚ್ಚು ಮಾಡಬೇಕು. ಈ ಭಾಗದಲ್ಲೂ ಕಬ್ಬು ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ಕಬ್ಬು ಬೆಳೆದರೆ ಸಾಲದು. ಅದಕ್ಕೆ ತಕ್ಕ ಪೋಷಕಾಂಶ ಒದಗಿಸಿದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ರೈತರು ಬೆಳವಣಿಗೆಯಾಗಲು ಸರ್ಕಾರಗಳು ಮೊದಲು ಆಹಾರ ಭದ್ರತೆ ಒದಗಿಸಬೇಕು. ಕಳೆದ ಹಲವು ವರ್ಷಗಳಿಂದ ಆಳುತ್ತಿರುವ ರಾಜ್ಯ, ಕೇಂದ್ರ ಸರ್ಕಾರಗಳು ರೈತರಿಗೆ ಕೇವಲ ಆಶ್ವಾಸನೆ ನೀಡುತ್ತಿವೆ. ಆದರೆ ಅವರ ಸಮಸ್ಯೆಗೆ ಪರಿಹಾರ ಮಾತ್ರ ನೀಡುತ್ತಿಲ್ಲ. ಒಬ್ಬರನ್ನೊಬ್ಬರು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರ ಮಂಡಿಸಿರುವ ಬಜೆಟ್ ಗಳು ಸಬ್ಸಿಡಿಗೆ ಬಳಕೆಯಾಗುತ್ತಿದೆ. ರೈತರು ಅಭಿವೃದ್ಧಿ ಹೊಂದಬೇಕಾದರೆ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದರು.
ಈ ವೇಳೆ ಮಾಗಣಗೇರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು, ಕಡಕೋಳ ಮಠದ ಡಾ.ರುದ್ರಮುನಿ ಶಿವಾಚಾರ್ಯರು, ಸೊನ್ನ ಮಠದ ಡಾ. ಶಿವಾನಂದ ಮಹಾಸ್ವಾಮೀಜಿ, ಯಡ್ರಾಮಿ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಸುರಪಾಲಿ-ಜಮಖಂಡಿಯ ಗಿರೀಶಾನಂದ ಮಹಾ ಸ್ವಾಮೀಜಿ, ಅರವಿಂದ ಮಹಾರಾಜರು, ಶರಣಾನಂದ ಮಹಾಸ್ವಾಮಿಗಳು, ಹಿರಿಯ ವಿಜ್ಞಾನಿ ಡಾ. ಮಂಜುನಾಥ ಚೌರೆಡ್ಡಿ ಡಾ. ಸುನೀಲಕುಮಾರ ನೂಲಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ, ಈರಣ್ಣ ಭಜಂತ್ರಿ ಇತರರಿದ್ದರು.







