ಕಾಸರಗೋಡು ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ನೇಮಕ

ಕಾಸರಗೋಡು: ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇದುವರೆಗೆ ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದ ಅರ್ಜುನ್ ಪಾಂಡ್ಯನ್ ಅವರನ್ನು ಕೃಷಿ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಧನ್ಯಾ ಸುರೇಶ್ ಅವರು ಗಡಿ ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
ಶ್ರೀಧನ್ಯಾ ಸುರೇಶ್: ಸವಾಲುಗಳನ್ನು ಮೆಟ್ಟಿ ನಿಂತು ಐಎಎಸ್ ತಲುಪಿದ ಸಾಧಕಿ
ಶ್ರೀಧನ್ಯಾ ಸುರೇಶ್ ಅವರು ಕೇರಳದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೊಂದಾದ ವಯನಾಡಿನ 'ಕುರಿಚ್ಯ' ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ತಮ್ಮ ಸಮುದಾಯದಿಂದ ದೇಶದ ಅತ್ಯುನ್ನತ ಸಿವಿಲ್ ಸರ್ವೀಸ್ (ಐಎಎಸ್) ಪರೀಕ್ಷೆ ತೇರ್ಗಡೆಯಾದ ಕೇರಳದ ಮೊದಲ ಬುಡಕಟ್ಟು ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶಿಕ್ಷಣ ಮತ್ತು ಹಿನ್ನೆಲೆ:-
ತೀರಾ ಸಾಮಾನ್ಯ ಸೌಲಭ್ಯಗಳೂ ಇಲ್ಲದ, ದಿನಗೂಲಿ ನೌಕರರ ಕುಟುಂಬದಲ್ಲಿ ಜನಿಸಿದ ಶ್ರೀಧನ್ಯಾ, ಮಲಯಾಳ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ತೀವ್ರ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಐಎಎಸ್ ಅಧಿಕಾರಿಯಾಗಬೇಕೆಂಬ ತಮ್ಮ ಕನಸನ್ನು ಕಠಿಣ ಪರಿಶ್ರಮದಿಂದ ನನಸಾಗಿಸಿಕೊಂಡರು.
ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸಿ, 2018ರ ಯುಪಿಎಸ್ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 410ನೇ ರ್ಯಾಂಕ್ ಪಡೆಯುವ ಮೂಲಕ ದೇಶದ ಗಮನ ಸೆಳೆದರು. ದೆಹಲಿಯಲ್ಲಿ ನಡೆಯಲಿರುವ ಸಂದರ್ಶನಕ್ಕೆ ಹೋಗಲು ಹಣವಿಲ್ಲದಿದ್ದಾಗ ಊರಿನ ಜನರೇ ಹಣ ಒಟ್ಟುಗೂಡಿಸಿ ನೆರವಾಗಿದ್ದು ಇವರ ಯಶಸ್ಸಿನ ಹಾದಿಯ ಪ್ರಮುಖ ಮೈಲಿಗಲ್ಲು. ಸಾಮಾನ್ಯ ಹಳ್ಳಿಯೊಂದರಿಂದ ಆರಂಭವಾಗಿ, ಕಠಿಣ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಜಿಲ್ಲೆಯ ಅತ್ಯುನ್ನತ ಅಧಿಕಾರದ ಗದ್ದುಗೆಯವರೆಗೆ ತಲುಪಿರುವ ಇವರನ್ನು ಕಾಸರಗೋಡಿನ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.
ಅರ್ಜುನ್ ಪಾಂಡ್ಯನ್ ಮಾರ್ಚ್ ತಿಂಗಳಲ್ಲಿ ಕಾಸರಗೋಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡಿದ್ದರು. ಆರು ತಿಂಗಳ ಕಾಲ ಸೇವೆ ಸಲ್ಲಿಸಿದ್ದ ಅವರು ತಮ್ಮ ಜನಸ್ನೇಹಿ ಆಡಳಿತದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.






