ಅ. 29 ರಂದು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಕುಟುಂಬ ಸಂಗಮ; ಪೂರ್ವ ಭಾವಿ ಸಭೆ
![ಅ. 29 ರಂದು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಕುಟುಂಬ ಸಂಗಮ; ಪೂರ್ವ ಭಾವಿ ಸಭೆ ಅ. 29 ರಂದು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಕುಟುಂಬ ಸಂಗಮ; ಪೂರ್ವ ಭಾವಿ ಸಭೆ](https://www.varthabharati.in/h-upload/2023/10/10/1201155-whatsapp-image-2023-10-10-at-80150-am.webp)
ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ದೇಶಮಂಗಲ, ಉಡುವ, ಬೆದ್ರಡ್ಕ, ಉಜಿರೆಕೆರೆ, ಸಿರಿಬಾಗಿಲು ಪ್ರದೇಶದ ಕೂಟ ಬಂದು ಸಮಾಜ ಬಾಂಧವರು ಮತ್ತು ಬಂಧುಗಳು ಸದಸ್ಯರಾಗಿರುವ ಶಿವನಾರಾಯಣ ಗೆಳೆಯರ ವಾಟ್ಸಪ್ ಬಳಗದ ವತಿಯಿಂದ ಇದೇ ಅಕ್ಟೋಬರ್ 29 ರಂದು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಜರಗಲಿರುವ 'ಕುಟುಂಬ ಸಂಗಮ' ಕಾರ್ಯಕ್ರಮದ ಪೂರ್ವ ಭಾವಿ ಸಭೆಯು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ನಡೆಯಿತು.
ಸಭೆಯಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮಾತನಾಡಿ, " ಇಂತಹ ಕಾರ್ಯಕ್ರಮವು ಸ್ಥಳೀಯ ಕೂಟ ಸಮಾಜದ ಮನೆ ಮನಗಳಲ್ಲಿ ಸಹಕಾರ, ಏಕತಾ ಮನೋಭಾವಕ್ಕೆ ಪೂರಕವಾಗುತ್ತದೆ. ಕೂಟಬಂದು ಸಿರಿಬಾಗಿಲು ವೆಂಕಪ್ಪಯ್ಯ ನವರ ಹೆಸರಿನ ಸಾಂಸ್ಕೃತಿಕ ಭವನ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬೆಳಗುವಂತಾಗಲು ಇಂತಹ ಕಾರ್ಯಕ್ರಮ ಅಗತ್ಯ. ಮುಖ್ಯವಾಗಿ ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯತತ್ಪರರಾಗಬೇಕು. ಕಲೆ-ಸಂಸ್ಕೃತಿ ಮುಂದಿನ ದಿನಗಳಲ್ಲಿ ಯುವ ತಲೆಮಾರಿಗೆ ಹಸ್ತಾಂತರ ವಾಗಬೇಕು. ನಮ್ಮ ಈ ಪರಿಸರದಲ್ಲಿ ಹಿಂದಿನ ತಲೆಮಾರಿನ ಬನ್ನೂರು ನಾರಾಯಣ ಭಾಗವತರು, ಬನ್ನೂರು ವೆಂಕಣ್ಣ,ಪುತ್ತಿಗೆ ಜೋಯಿಸರು ದೇಶಮಂಗಲ ಕೃಷ್ಣ ಕಾರಂತ, ಉಡುವಣ್ಣಾಯರು ,ಸಿರಿಬಾಗಿಲು ವೆಂಕಪ್ಪಯ್ಯ ಮೊದಲಾದವರು ಕಲೆ- ಸಂಸ್ಕೃತಿಗೆ ಅಪಾರ ಕೊಡುಗೆ ಇತ್ತವರುʻ ಎಂದು ನೆನಪಿಸಿಕೊಂಡರು.
ದೇಶಮಂಗಲ ಶಂಕರನಾರಾಯಣ ಕುಟ್ಟಿಚ್ಚಾತ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಕಾರಂತ ಕಾರ್ಯಕ್ರಮ ಯಶಸ್ವಿಯಾಗುವಂತೆ ಶುಭ ಹಾರೈಸಿದರು.
ವೆಂಕಟರಮಣ ಹೊಳ್ಳ ನೀರಾಳ, ಶಂಕರನಾರಾಯಣ ಮಯ್ಯ ನೀರಾಳ ಶುಭಾಶಂಸನೆಗೈದರು.
ನಿಗದಿಯಾದ ಕಾರ್ಯಕ್ರಮದ ದಿನದಂದು ಗಣಪತಿ ಹವನ, ಸಭಾ ಕಾರ್ಯಕ್ರಮ, ಹಿರಿಯರು ಕಿರಿಯರಿಗೆ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ , ಪ್ರತಿಭಾ ಪ್ರದರ್ಶನ, ಗಣ್ಯರಿಗೆ ಸನ್ಮಾನ, ಸಭಾ ಕಾರ್ಯಕ್ರಮ ನಡೆಯಲಿರುವುದು.
ಸಭೆಯನ್ನು ಪ್ರಶಾಂತ ಹೊಳ್ಳ ನೀರಾಳ ನಿರೂಪಿಸಿ, ಪ್ರಸನ್ನ ಕಾರಂತ ದೇಶಮಂಗಲ ವಂದಿಸಿದರು.