ಕಾಸರಗೋಡು ಸಿರಿಬಾಗಿಲಿನಲ್ಲಿ ಅಂತರಾಜ್ಯ ಮಟ್ಟದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ 5ನೇ ಸಮ್ಮೇಳನ

ಕಾಸರಗೋಡು : ಇಲ್ಲಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಇದರ ಐದನೇ ಸಮ್ಮೇಳನವು ಭಾನುವಾರ ನಡೆಯಿತು.
ಹಿರಿಯ ಚಿಂತಕರು ಸಾಹಿತ್ಯ ಪ್ರವರ್ತಕರು ಆದ ವಿ.ಬಿ.ಕುಳಮರ್ವ ಸರ್ವಾಧ್ಯಕ್ಷರಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಉಡುಪಿಯ ವಾಗ್ಮಿ ವಿದ್ವಾನ್ ರಘುಪತಿ ಭಟ್ ವೇದಿಕೆಯಲ್ಲಿದ್ದರು. ಆಹ್ವಾನಿತರಾಗಿ ಕ ಚು ಸಾ ಪರಿಷತ್ ಹುಬ್ಬಳ್ಳಿ ಇದರ ಸ್ಥಾಪಕ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷರಾದ ವೆಂಕಟ ಭಟ್ ಎಡನೀರು, ಯಕ್ಷಗಾನ ಭಾಗವತ ಮತ್ತು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಅವರು ಉಪಸ್ಥಿತರಿದ್ದರು.
ಗಡಿನಾಡು ಕಾಸರಗೋಡಿನ ಹಿರಿಯ ಸಾಹಿತಿ ಮತ್ತು ಸಂಶೋಧಕ ರಾಧಾಕೃಷ್ಣ ಕೆ.ಉಳಿಯತಡ್ಕ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗಣಪತಿ ಭಟ್ಟ ವರ್ಗಾಸರ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಉತ್ತರ ಕನ್ನಡದ ವಸಂತ ನಾಯಕ ಆಶಯ ನುಡಿಯಾಡಿದರು. ಮೈಸೂರಿನ ಬಾನುಲಿ ನಿವೃತ್ತ ಅಧಿಕಾರಿ ಚುಟುಕು ಸಾಹಿತ್ಯದ ಕುರಿತು, ಗದಗದ ವೀರನಗೌಡ ಮರಿಗೌಡ ವಚನ- ಚುಟುಕು ಸಾಹಿತ್ಯ ಅನುಬಂಧದ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.
ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಸುರೇಶ ನೆಗಳಗುಳಿಯವರು ವಹಿಸಿದ್ದರು. ಡಾ.ಕೊಳ್ಚಪ್ಪೆ ಗೋವಿಂದ ಭಟ್ ಆಶಯ ನುಡಿಯಾಡಿದರು. ಕವಿಗಳಾದ ಕಸ್ತೂರಿ ಜಯರಾಮ್, ಪ್ರೇಮ ಬಿರಾದಾರ್, ರವೀಂದ್ರ ಶೆಟ್ಟಿ ಬಳಂಜ, ಲಕ್ಷ್ಮಿ ವಿ.ಭಟ್, ಸುಲೋಚನಾ ನವೀನ್, ಕೆ ನರಸಿಂಹ ಭಟ್, ಏತಡ್ಕ ಶ್ರೀ ಹರಿ ಭಟ್ ಪೆಲ್ತಾಜೆ, ಶಶಿಕಲಾ ಟೀಚರ್, ಪ್ರಮೀಳಾ ಟಿ ಕೆ ಚುಳ್ಳಿಕಾಣ, ಚಿತ್ರಕಲಾ ದೇವರಾಜ್,ವಿಜಯಲಕ್ಷ್ಮಿ ವಿರೂಪಾಕ್ಷ ಕೊಳ್ಳಿ, ದರ್ಶನ್ ಚಿರಾಲ ಡಿ ಇವರು ಸ್ವ ರಚಿತ ಕವನ ವಾಚಿಸಿದರು.
ಗಡಿನಾಡು ಕಾಸರಗೋಡು ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನವು ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದ ನಿಜವಾದ ಸಿರಿಬಾಗಿಲು ಎಂದು ಸಮ್ಮೇಳನದ ಸರ್ವಾಧ್ಯಕ್ಷರಾದ ವಿದ್ವಾಂಸ ವಿ.ಬಿ.ಕುಳಮರ್ವ ಅವರು ತಮ್ಮ ಅನಿಸಿಕೆಗಳನ್ನು ಹಂಚಿದರು. ಅಲ್ಲದೆ ದೂರದ ಹುಬ್ಬಳ್ಳಿ, ಮೈಸೂರು ವಿಭಾಗದ ಮಹನೀಯರು ಪ್ರತಿಷ್ಠಾನದ ಜತೆ ಕೈಜೋಡಿಸಿ ರುವುದು ಸಂತಸ ತಂದಿದೆ ಎಂದರು.
ನಿರೂಪಣೆಯನ್ನು ಹಾವೇರಿಯ ಡಾ.ಗಂಗಯ್ಯ ಕುಲಕರ್ಣಿ, ಮಂಗಳೂರಿನ ರೇಖಾ ಸುದೇಶ್, ಬೆಂಗಳೂರಿನ ವಿದ್ಯಾ ಬೇಕಲ್ ಮತ್ತು ಹೆಬ್ರಿಯ ಪ್ರೇಮ ಪಾಟೀಲ್ ನಡೆಸಿಕೊಟ್ಟರು.
ಅಪರಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ.ವಾಣಿಶ್ರೀ ಕಾಸರಗೋಡು ಅವರ ಸಂಗೀತ ವೈಭವ ಸಂಪನ್ನವಾಯಿತು. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಇವರ ನೇತೃತ್ವದಲ್ಲಿ ನಡೆದ 'ಹರಿಸರ್ವೋತ್ತಮ' ಪ್ರಸಂಗದ ಯಕ್ಷಗಾನ ತಾಳಮದ್ದಳೆ ವಿಶೇಷ ಮೆರುಗು ನೀಡಿತು. ಬಲಿಪ ಶಿವಶಂಕರ ಭಾಗವತ, ಗೋಪಾಲಕೃಷ್ಣ ನಾವಡ ಮತ್ತು ಮುರಳಿ ಮಾಧವ ಹಿಮ್ಮೇಳದಲ್ಲಿದ್ದು ಮುಮ್ಮೇಳದಲ್ಲಿ ವಾದಿರಾಜ ಕಲ್ಲುರಾಯ, ಗಣೇಶ ಶೆಟ್ಟಿ ಕನ್ನಡಿಕಟ್ಟೆ,ಸದಾಶಿವ ಆಳ್ವಾ ತಲಪಾಡಿ ಭಾಗವಹಿಸಿದರು. ಪ್ರಭಾಕರ ಡಿ ಸುವರ್ಣ ಅವರು ತಾಳಮದ್ದಳೆ ಗೆ ಪ್ರಾಯೋಜಕತ್ವ ವಹಿಸಿದರುದ. ಗ್ರಾಮೀಣ ಪ್ರದೇಶವಾದ ಸಿರಿಬಾಗಿಲಿನಲ್ಲಿ ನಡೆದ ಈ ಕಾರ್ಯಕ್ರಮ ಸಾಹಿತ್ಯ ಅಭಿಮಾನಿಗಳ ಮೆಚ್ಚುಗೆ ಗೆ ಪಾತ್ರವಾಯಿತು.
ಈ ವೇಳೆ ಸಿರಿಬಾಗಿಲು ರಾಮಕೃಷ್ಣ ಮಯ್ಯ ದಂಪತಿಗಳನ್ನು ಗೌರವಿಸಲಾಯಿತು.