ಕನ್ನಡಿಗರ ಕನಸಿನ ‘ಗಿಳಿವಿಂಡು’ ಯೋಜನೆ ಸ್ಥಗಿತ; ಉಭಯ ಸರ್ಕಾರಗಳ ಮಧ್ಯಪ್ರವೇಶಕ್ಕೆ ಆಗ್ರಹ

ಕಾಸರಗೋಡು: ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗರ ಕನಸಿನ ಯೋಜನೆಯಾಗಿರುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಮನೆಯ ಪುನರ್ನವೀಕರಣ ಹಾಗೂ ಕರ್ನಾಟಕ ಮತ್ತು ಕೇರಳ ಸರ್ಕಾರಗಳ ಜಂಟಿ ಯೋಜನೆಯಾದ ‘ಗಿಳಿವಿಂಡು’ ಯೋಜನೆಯ ಕಾಮಗಾರಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ನಿರ್ಮಾಣ ಹಂತದಲ್ಲಿರುವ ಸಾಂಸ್ಕೃತಿಕ ಭವನ ಶಿಥಿಲಾವಸ್ಥೆಯಲ್ಲಿ ಮೂಲೆಗುಂಪಾಗಿದೆ.
ಸಪ್ತಭಾಷಾ ಸಂಗಮ ಭೂಮಿಯಾಗಿರುವ ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ಇತಿಹಾಸವನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಮಂಜೇಶ್ವರದಲ್ಲಿ 12,000 ಚದರ ಅಡಿ ವಿಸ್ತೀರ್ಣದ ‘ಭವನಿಕ’ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಕೈಹಾಕಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.
‘ಗಿಳಿವಿಂಡು’ ಯೋಜನೆಯಡಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ‘ಆನಂದ’, ‘ಸಾಕೇತ’ ಮತ್ತು ‘ವೈಶಾಖಿ’ ಹೆಸರಿನ ಮೂರು ಅತಿಥಿಗೃಹಗಳು, ‘ನಳಂದ’ ಸಂಶೋಧನಾ ಕೇಂದ್ರ ಹಾಗೂ ಬಯಲು ರಂಗಮಂದಿರ ನಿರ್ಮಿಸಲು ಅಂದಿನ ಸಮಿತಿಯು ನಿರ್ಣಯ ಕೈಗೊಂಡಿತ್ತು ಎಂದು ತಿಳಿದುಬಂದಿದೆ.
ಈ ಸಾಂಸ್ಕೃತಿಕ ಕೇಂದ್ರದ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ, ಜನೋಪಕಾರಿ ಚಟುವಟಿಕೆಗಳಿಗಾಗಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಈ ಸಂಬಂಧ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ‘ಬಿಲ್ಡ್-ಅಪ್ ಕಾಸರಗೋಡು’ ಆಡಳಿತ ಸಮಿತಿಯು ಒತ್ತಾಯಿಸಿದೆ.






