kasaragod : ಡಿವೈಡರ್ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ

ಕಾಸರಗೋಡು : ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಡಿವೈಡರ್ಗೆ ಬಡಿದು ಮಗುಚಿ ಬಿದ್ದು ರೋಗಿ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಮಂಗಳವಾರ ತಡೆರಾತ್ರಿ ನಡೆದಿದೆ.
ಉಪ್ಪಳ ಕೆಎಸ್ಇಬಿ ಗುತ್ತಿಗೆದಾರ, ಬಂದ್ಯೋಡು ಸಮೀಪದ ಅಡ್ಕ ನಿವಾಸಿ ಅಶೋಕ (41) ಮೃತಪಟ್ಟವರು. ಅಪಘಾತದಲ್ಲಿ ಗಾಯಗೊಂಡ ಇವರ ಪತ್ನಿ ಪ್ರತಿಭಾ, ಸಹೋದರ ರಾಜೇಶ್, ರಾಜೇಶ್ ಅವರ ಪತ್ನಿ ಹಾಗೂ ಆಂಬುಲೆನ್ಸ್ ಚಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಾರೋಗ್ಯದ ಕಾರಣ ಅಶೋಕ ಅವರು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಅವರ ಆರೋಗ್ಯ ಸ್ಥಿತಿ ಸುಧಾರಿಸದಿದ್ದಾಗ, ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಈ ಅಪಘಾತ ನಡೆದಿದೆ.
ಗಂಭೀರ ಸ್ಥಿತಿಯಲ್ಲಿದ್ದ ಅಶೋಕ ಅವರನ್ನು ಕೂಡಲೇ ಉಪ್ಪಳದ ಆಸ್ಪತ್ರೆಗೆ ಮತ್ತು ಆ ನಂತರ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ, ಏಕೈಕ ಪುತ್ರನನ್ನು ಅಗಲಿದ್ದಾರೆ.




