ಕಾಸರಗೋಡು: ಹಲಸು ತುಂಡರಿಸುತ್ತಿದ್ದ ಕತ್ತಿಯ ಮೇಲೆ ಬಿದ್ದು ಬಾಲಕ ಮೃತ್ಯು

ಕಾಸರಗೋಡು: ಹಲಸಿನ ಹಣ್ಣು ತುಂಡರಿಸುತ್ತಿದ್ದಾಗ ಕತ್ತಿ ಮೇಲೆ ಬಿದ್ದು ಎಂಟು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಡಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಬೆಳ್ಳೂರಡ್ಕದ ಅಮೀರ್- ಝುಲೈಕಾ ದಂಪತಿಯ ಪುತ್ರ ಹುಸೈನ್ ಶಹಬಾಝ್ ಮೃತಪಟ್ಟ ಬಾಲಕ. ತಾಯಿ ಹಲಸಿನ ಹಣ್ಣು ತುಂಡರಿಸುತ್ತಿದ್ದಾಗ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಕತ್ತಿಯ ಮೇಲೆ ಬಿದ್ದು ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಎದೆಗೆ ಉಂಟಾದ ಬಲವಾದ ಗಾಯ ಸಾವಿಗೆ ಕಾರಣ ಎನ್ನಲಾಗಿದೆ.
ಹಲಗೆಯಲ್ಲಿ ಅಳವಡಿಸಿದ್ದ ಕತ್ತಿ( ಮಣೆಕತ್ತಿ) ಯಿಂದ ಹಲಸಿನ ಹಣ್ಣು ತುಂಡರಿಸುತ್ತಿದ್ದ ಸಂದರ್ಭದಲ್ಲಿ ಅಂಗಳದಲ್ಲಿ ಅಡವಾಡುತ್ತಿದ್ದ ಅವಳಿ ಮಕ್ಕಳಲ್ಲಿ ಒಬ್ಬನಾಗಿದ್ದ ಹುಸೈನ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ.
ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story