ಕಾಸರಗೋಡು: ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಮೃತ್ಯು

ಕಾಸರಗೋಡು: ಅಂಗನವಾಡಿ ಮುಂಭಾಗದ ಧ್ವಜಸ್ತಂಭದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿಕೊಂಡ ಪರಿಣಾಮ 11 ವರ್ಷದ ಬಾಲಕ ಮೃತಪಟ್ಟ ಘಟನೆ ಮಡಿಕೈ ಸಮೀಪದ ಕಾಞಿ ಪ್ಪೊಯಿಲ್ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ರಾಜೇಶ್ – ನೀತು ದಂಪತಿಯ ಪುತ್ರ ಅನೇಕ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಕಾಞಿ ಪ್ಪೊಯಿಲ್ ನಂದನಕುಳಿ ಅಂಗನವಾಡಿ ಪರಿಸರದಲ್ಲಿ ಈ ಘಟನೆ ನಡೆದಿದೆ.
ಕಾಞಿ ಪ್ಪೊಯಿಲ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿಯಾಗಿದ್ದ ಅನೇಕ್, ಗುರುವಾರ ಸಂಜೆ 5 ಗಂಟೆಯ ವೇಳೆಗೆ ಅಂಗನವಾಡಿ ಮುಂಭಾಗದಲ್ಲಿ ಆಟವಾಡುತ್ತಿದ್ದ ಎನ್ನಲಾಗಿದೆ.
ಈ ವೇಳೆ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಹಗ್ಗ ಆಕಸ್ಮಿಕವಾಗಿ ಬಾಲಕನ ಕುತ್ತಿಗೆಗೆ ಸಿಲುಕಿಕೊಂಡಿದೆ. ಈ ದಾರಿಯಾಗಿ ತೆರಳುತ್ತಿದ್ದ ಆಟೋ ರಿಕ್ಷಾ ಚಾಲಕರೋರ್ವರು ಗಮನಿಸಿ ಬಾಲಕನನ್ನು ಹಗ್ಗದಿಂದ ಬಿಡಿಸಿ ಕೂಡಲೇ ಕಾಞಂಗಾಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಬಾಲಕ ಮೃತಪಟ್ಟಿದ್ದನು ಎಂದು ತಿಳಿದುಬಂದಿದೆ.
ಆಟವಾಡುತ್ತಿದ್ದ ವೇಳೆ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿಕೊಂಡಿರುವುದೇ ಸಾವಿಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






