ಕಾಸರಗೋಡು: ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಅಧಿಕಾರ ಸ್ವೀಕಾರ

ಕಾಸರಗೋಡು: ಕಾಸರಗೋಡು ಜಿಲ್ಲೆಯ 27ನೇ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರು ನೂತನ ಡಿಸಿಗೆ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಶ್ರೀಧನ್ಯಾ ಸುರೇಶ್, ಜಿಲ್ಲೆಯಲ್ಲಿ ಏಮ್ಸ್ (AIIMS) ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು ಮತ್ತು ಇದಕ್ಕಾಗಿ ವಿಸ್ತೃತ ಅಧ್ಯಯನ ನಡೆಸಲಾಗುವುದು ಎಂದ ಅವರು, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ವರ್ಗದ ಜನರ ಬೆಂಬಲ ಮತ್ತು ಸಹಕಾರ ಅಗತ್ಯ ಎಂದರು.
ಮೊದಲ ಬುಡಕಟ್ಟು ಮಹಿಳಾ ಡಿಸಿ
ಪರಿಶಿಷ್ಟ ಪಂಗಡ ಸಮುದಾಯದಿಂದ ಕಾಸರಗೋಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಶ್ರೀಧನ್ಯಾ ಪಾತ್ರರಾಗಿದ್ದಾರೆ. ಅಲ್ಲದೆ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿ ಇವರಾಗಿದ್ದಾರೆ. 2019ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಶ್ರೀಧನ್ಯಾ, 2018ರ ಮೊದಲ ಪ್ರಯತ್ನದಲ್ಲೇ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 410ನೇ ರ್ಯಾಂಕ್ ಗಳಿಸಿದ್ದರು. ಈ ಮೂಲಕ ಕೇರಳ ರಾಜ್ಯದ ಪರಿಶಿಷ್ಟ ಪಂಗಡ ಸಮುದಾಯದಿಂದ ಐಎಎಸ್ ತೇರ್ಗಡೆಯಾದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದರು.ಇವರು ಕಲ್ಲಿಕೋಟೆ ದೇವಗಿರಿ ಕಾಲೇಜಿನಿಂದ ಝೂಲಜಿಯಲ್ಲಿ ಪದವಿ ಮತ್ತು ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಉತ್ತರಾಖಂಡದ ಮಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ ಇವರು, ಈ ಹಿಂದೆ ಕಲ್ಲಿಕೋಟೆ ಸಹಾಯಕ ಕಲೆಕ್ಟರ್, ಪೆರಿಂದಲ್ಮಣ್ಣ ಸಬ್ ಕಲೆಕ್ಟರ್, ನೋಂದಣಿ ಇಲಾಖೆ ಇನ್ಸ್ಪೆಕ್ಟರ್ ಜನರಲ್ (ಐಜಿ) ಮತ್ತು ಆಹಾರ ಸುರಕ್ಷತಾ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು ವಯನಾಡ್ನ ಪೊಝುತನಾ ಇಡಿಯಂವಯಲ್ ಅಂಬಲಕೊಲ್ಲಿಯ ಸುರೇಶ್ ಮತ್ತು ಕಮಲಾ ದಂಪತಿಯ ಪುತ್ರಿಯಾಗಿದ್ದು, ಗಾಯಕ್ ಆರ್. ಚಂದ್ ಅವರ ಪತ್ನಿಯಾಗಿದ್ದಾರೆ.






