ಕಾಸರಗೋಡು | ಕಾರಿಗೆ ಟಿಪ್ಪರ್ ಢಿಕ್ಕಿ: ಪೊಲೀಸ್ ಕಾನ್ ಸ್ಟೇಬಲ್ ಮೃತ್ಯು

ಕಾಸರಗೋಡು: ಕಾರಿಗೆ ಟಿಪ್ಪರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ವೊಬ್ಬರು ಮೃತಪಟ್ಟ ಘಟನೆ ನಗರ ಹೊರವಲಯದ ಚೆಂಗಳ ನಾಲ್ಕನೇ ಮೈಲ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಬೇಕಲ ಡಿವೈಎಸ್ಪಿ ದಳದ ಕಾನ್ ಸ್ಟೇಬಲ್ ಸಜೀಶ್ (38) ಮೃತಪಟ್ಟವರು. ಇವರು ಚೆರ್ವತ್ತೂರು ಮಾಯಿಚ್ಚಿ ನಿವಾಸಿಯಾಗಿದ್ದರು.
ಮುಂಜಾನೆ 2:45ರ ವೇಳೆ ಈ ಅಪಘಾತ ಸಂಭವಿಸಿದೆ. ಸಜೀಶ್ ಪ್ರಯಾಣಿಸುತ್ತಿದ್ದ ಆಲ್ಟೊ ಕಾರು ಹಾಗೂ ಟಿಪ್ಪರ್ ಲಾರಿ ಮುಖಾಮುಖಿ ಢಿಕ್ಕಿಯಾಗಿ ಅಪಘಾತ ನಡೆದಿದೆ. ಗಂಭೀರ ಗಾಯ ಗೊಂಡ ಸಜೀಶ್ ರನ್ನು ಸಮೀಪದ ಚೆಂಗಳದಲ್ಲಿರುವ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಅವರ ಜೊತೆಗಿದ್ದ ಸಿವಿಲ್ ಪೊಲೀಸ್ ಆಫೀಸರ್ ಸುಭಾಶ್ಚಂದ್ರನ್ ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾದಕ ದ್ರವ್ಯ ಮಾರಾಟ ಸಂಬಂಧ ಲಭಿಸಿದ ಮಾಹಿತಿಯ ಜಾಡು ಹಿಡಿದು ಪೊಲೀಸ್ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ತನಿಖೆ ನಿಮಿತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.





