ಕೊಡಗಿನ ಉದ್ಯಮಿ ವಯನಾಡಿನಲ್ಲಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಮೂಲದ ಉದ್ಯಮಿಯೊಬ್ಬರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ವಯನಾಡಿನಲ್ಲಿ ನಡೆದಿರುವುದು ವರದಿಯಾಗಿದೆ.
ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ ಸಜೀರ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಕಾರಿನಲ್ಲಿದ್ದ ಸಜೀರ್ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಜೀರ್ ಅವರು ಬಾಪು ಎಂಬಾತನಿಗೆ 20 ಲಕ್ಷ ರೂ. ಸಾಲ ನೀಡಿದ್ದರು. ಆದರೆ ಬಾಪು ಹಣವನ್ನು ವಾಪಸ್ ನೀಡದ ಕಾರಣ ಮನನೊಂದ ಸಜೀರ್ ಆತನ ಮನೆ ಎದುರೇ ಕಾರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸಜೀರ್ ಮೃತಪಟ್ಟರೆ, ಉಳಿದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಟ್ಟ ಗ್ರಾಮದಲ್ಲಿ ಸಜೀರ್ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಆತ್ಮಹತ್ಯೆಗೂ ಮೊದಲು ವೀಡಿಯೊ ಮಾಡಿದ್ದ ಅವರು ನಮ್ಮ ಸಾವಿಗೆ ಬಾಪು ಕಾರಣವೆಂದು ಆರೋಪಿಸಿದ್ದಾರೆ.




