ದುಬಾರೆ ಸಾಕಾನೆ ಶಿಬಿರದಿಂದ ವೀರನ ಹೊಸಹಳ್ಳಿ ಶಿಬಿರಕ್ಕೆ ತೆರಳಿದ ಜಂಬೂ ಸವಾರಿ ಆನೆಗಳು

ಮಡಿಕೇರಿ : ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೊದಲ ತಂಡದ ನಾಲ್ಕು ಆನೆಗಳನ್ನು ದುಬಾರೆ ಸಾಕಾನೆ ಶಿಬಿರದಿಂದ ರವಿವಾರ ಹುಣಸೂರು ಬಳಿಯ ವೀರನ ಹೊಸಹಳ್ಳಿ ಶಿಬಿರಕ್ಕೆ ಕಳುಹಿಸಲಾಯಿತು.
ದುಬಾರೆ ಶಿಬಿರದ ಧನಂಜಯ, ಕಂಜನ್, ಪ್ರಶಾಂತ ಹಾಗೂ ಕಾವೇರಿ ಆನೆಗಳನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ಲಾರಿಗಳಲ್ಲಿ ಕಳುಹಿಸಿಕೊಡಲಾಯಿತು.
ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್, ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಕನ್ನಂಡ ರಂಜನ್, ಧರ್ಮೇಂದ್ರ ಹಾಗೂ ಪಶು ತಜ್ಞ ವೈದ್ಯ ಡಾ.ಚಿಟ್ಟಿಯಪ್ಪ ಈ ಸಂದರ್ಭ ಹಾಜರಿದ್ದರು.
ಸೋಮವಾರ ಬೆಳಗ್ಗೆ ವೀರನಹೊಸಹಳ್ಳಿಯಿಂದ ಮೈಸೂರು ಕಡೆಗೆ ಮೊದಲ ಹಂತದ ಆನೆಗಳ ದಸರಾ ಗಜಪಯಣ ಆರಂಭಗೊಳ್ಳಲಿದೆ.
ಎರಡನೇ ತಂಡದಲ್ಲಿ ದುಬಾರೆ ಶಿಬಿರದ ಸಾಕಾನೆಗಳಾದ ಸುಗ್ರೀವ, ಗೋಪಿ, ಹರ್ಷ ಹಾಗೂ ಹೇಮಾವತಿ ತೆರಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





