Kodagu | ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ ಮಹಿಳೆ ನಾಪತ್ತೆಯಾಗಿ ಮೂರು ದಿನ ಕಳೆದರೂ ಸಿಗದ ಸುಳಿವು

ಮಡಿಕೇರಿ: ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ ಮಹಿಳೆಯೊಬ್ಬರು ನಾಪತ್ತೆಯಾಗಿ ಮೂರು ದಿನಗಳು ಕಳೆದರೂ ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ ಇದೀಗ ಶೋಧ ಕಾರ್ಯಕ್ಕೆ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್)ಯ ನೆರವನ್ನು ಪಡೆದುಕೊಳ್ಳಲಾಗಿದೆ.
ಕೇರಳ ಮೂಲದ ಶರಣ್ಯ(36) ಎಂಬವರು ಇತರ ಚಾರಣಿಗರೊಂದಿಗೆ ತಡಿಯಂಡಮೋಳ್ ಬೆಟ್ಟಕ್ಕೆ ಗುರುವಾರ ತೆರಳಿದ್ದರು. ಉಳಿದವರು ಹಿಂದಿರುಗಿದರಾದರು, ಶರಣ್ಯ ಹಿಂದಿರುಗಿರಲಿಲ್ಲ. ಈ ಬಗ್ಗೆ ತಕ್ಷಣವೇ ಅರಣ್ಯ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ಮತ್ತು ಗ್ರಾಮಸ್ಥರು ಬೆಟ್ಟದ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಂದು ರಾತ್ರಿ ತೀವ್ರ ಶೋಧ ಕಾರ್ಯ ನಡೆಸಿದ್ದರೂ ಅವರ ಪತ್ತೆಯಾಗಿರಲಿಲ್ಲ.
ಶುಕ್ರವಾರದಂದು ಸ್ಥಳೀಯರನ್ನು ಒಳಗೊಂಡ ಪೊಲೀಸರ ಎರಡು ತಂಡ ಮತ್ತು ಅರಣ್ಯ ಇಲಾಖೆಯ ಮೂರು ತಂಡಗಳು ತಡಿಯಂಡಮೋಳ್ ಬೆಟ್ಟದ ಆಸುಪಾಸಿನ ಅರಣ್ಯದ ಕಡಿದಾದ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರೂ ಸುಳಿವು ದೊರಕಿಲ್ಲ.
ಡ್ರೋನ್ ಬಳಕೆ: ನಾಪತ್ತೆಯಾಗಿರುವ ಶರಣ್ಯ ಅವರು ಬೆಟ್ಟದ ಯಾವುದೇ ಕಡಿದಾದ ಪ್ರದೇಶಗಳಲ್ಲಿ ಸಿಲುಕಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಪತ್ತೆಗಾಗಿ ಡ್ರೋನ್ ಮತ್ತು ಶ್ವಾನದಳದ ನೆರವನ್ನು ಪಡೆದು ಶೋಧ ಕಾರ್ಯವನ್ನು ನಡೆಸಲಾಗಿದೆ. ಎರಡು ದಿನಗಳ ಶೋಧ ಕಾರ್ಯ ಫಲಪ್ರದವಾಗದ ಹಿನ್ನೆಲೆಯಲ್ಲಿ ಪತ್ತೆ ಕಾರ್ಯಕ್ಕೆ ಶನಿವಾರದಿಂದ ನಕ್ಸಲ್ ನಿಗ್ರಹ ಪಡೆಯ ನೆರವನ್ನು ಪಡೆಯಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.
ಕುಟುಂಬಸ್ಥರಿಗೆ ಮಾಹಿತಿ: ಕೇರಳದ ಕೊಚ್ಚಿನ್ನಲ್ಲಿರುವ ಶರಣ್ಯ ಅವರ ಕುಟುಂಬಕ್ಕೆ ನಡೆದ ಘಟನೆಯ ಮಾಹಿತಿಯನ್ನು ನೀಡಲಾಗಿದ್ದು, ಶರಣ್ಯ ಅವರ ಅಣ್ಣ ಶ್ಯಾಮ್ ಸ್ಥಳಕ್ಕೆ ಆಗಮಿಸಿದ್ದಾರೆ.
ತಡಿಯಂಡಮೋಳ್ ಬೆಟ್ಟದಲ್ಲಿ ಮಹಿಳೆ ನಾಪತ್ತೆಯಾದ ಸಂದರ್ಭದಿಂದಲೇ ಕಕ್ಕಬ್ಬೆ ಯವಕಪಾಡಿಯ ಕುಡಿಯರ ಮುತ್ತಪ್ಪ, ಗ್ರಾಮಸ್ಥರು, ಪೊಲೀಸರು ಮತ್ತು ಅರಣ್ಯ ಇಲಾಖೆಯವರು ಶೋಧ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.






