ಪ್ರಚೋದನಕಾರಿ ಭಾಷಣ ಆರೋಪ: ಕುಶಾಲನಗರದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಕುಶಾಲನಗರ: ಕುಶಾಲನಗರದಲ್ಲಿ ಜೂ.30ರಂದು ನಡೆದ ಮತಾಂತರ ವಿರುದ್ಧ ಜನಜಾಗೃತಿ ಜಾಥಾ, ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಝಬೀವುಲ್ಲಾ ಎಂಬವರು ನೀಡಿದ ದೂರಿನ ಮೇಲೆ ಕರ್ನಾಟಕ ಹಿಂದೂ ಪ್ರಾಂತ್ಯ ಸಹ ಸಂಚಾಲಕ ಸತೀಶ್ ದಾವಣಗೆರೆ ಹಾಗೂ ಸೋಮವಾರಪೇಟೆಯ ಅಮೃತ್ ರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ:
ಜೂ.30ರಂದು ಕುಶಾಲನಗರ ಕಾರ್ ಸ್ಟ್ಯಾಂಡ್ನಲ್ಲಿ ನಡೆದ ಹಿಂದೂ ಸುರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಸತೀಶ್ ದಾವಣಗೆರೆ, ಒಂದು ಹಿಂದೂ ಹುಡುಗಿಯನ್ನು ಮತಾಂತರ ಮಾಡಿದರೆ ನಮ್ಮ ಹಿಂದೂ ಹುಡುಗರು 10 ಜನ ಮುಸ್ಲಿಮ್ ಹುಡುಗಿಯರನ್ನು ಮನೆಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ ಅವರ ವಿವಾಹದ ಖರ್ಚನ್ನು ನಾವೇ ವಹಿಸಿಕೊಳ್ಳುತ್ತೇವೆ. 3 ಮಕ್ಕಳನ್ನು ಮಾಡಿಕೊಂಡರೆ ಅದರಲ್ಲಿ ಒಂದು ಮಗುವಿಗೆ ವಿದ್ಯಾಭ್ಯಾಸದ ಖರ್ಚನ್ನು ನಾವೇ ಮಾಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.




