ಸುಂಟಿಕೊಪ್ಪ | ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಸುಂಟಿಕೊಪ್ಪ : ಇಲ್ಲಿನ ಕಾಂಡಕೊಲ್ಲಿ ರಸ್ತೆಯ ಚಾಮುಂಡೇಶ್ವರಿ ದೇವಾಲಯದ ಬಳಿಯಲ್ಲಿ ಅಕ್ರಮ ಗಾಂಜಾ ಮಾರಾಟ ಮತ್ತು ಬಳಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ ಸುಂಟಿಕೊಪ್ಪ ಪೊಲೀಸರು ಆರೋಪಿಗಳನ್ಮು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸುಂಟಿಕೊಪ್ಪ 2ನೇ ವಿಭಾಗದ ನಿವಾಸಿ ಸತ್ತಾರ್ ರಫೀಕ್ (40) ಮತ್ತು ಗದ್ದೆಹಳ್ಳ ನಿವಾಸಿ ವಿಷ್ಣು (21) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಬ್ಬರು ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಡನಕೊಲ್ಲಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ - ಸರಬರಾಜು ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 360 ಗ್ರಾಂ ಗಾಂಜಾ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸೋಮವಾರಪೇಟೆ ಪೊಲೀಸ್ ಉಪವಿಭಾಗದ ಡಿಎಸ್ಪಿ ಡಿ.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕರಾದ ಕೆ. ರಾಜೇಶ್, ಸುಂಟಿಕೊಪ್ಪ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಿ.ಹೆಚ್. ಜಗದೀಶ್ ಮತ್ತು ಸಿಬ್ಬಂದಿಗಳಾದ ಜಗದೀಶ್, ಪ್ರವೀಣ್. ನಿಶಾಂತ್, ಸೌಮ್ಯ, ಪುನೀತ್, ಸಂತೋಷ್ ಹಾಗೂ ಶ್ರೀಕಾಂತ್ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.