Kolara | ಕುರಿ ಕೊಂದ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಜಗಳ: ಓರ್ವ ಮಹಿಳೆ ಸಾವು

ಕೋಲಾರ, ಆ.25 : ಕುರಿಯನ್ನು ಕೊಂದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಈ ಮಧ್ಯೆ ವೃದ್ದೆಯೊಬ್ಬರು ಕೊಲೆಯಾಗಿರುವ ಘಟನೆ ಕೋಲಾರದ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಮದ್ದೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಚ್ಚಾರ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ವೆಂಕಟಲಕ್ಷಮ್ಮ (65) ಕೊಲೆಯಾದ ಮಹಿಳೆ ಎಂದು ತಿಳಿದು ಬಂದಿದೆ.
ನಿನ್ನೆ ಕುರಿಯೊಂದು ಸಾವನ್ನಪ್ಪಿದ ಹಿನ್ನೆಲೆ, ವೆಂಕಟಲಕ್ಷ್ಮಮ್ಮ ಹಾಗೂ ಆಂಜಪ್ಪ ಕುಟುಂಬದ ನಡುವೆ ಜಗಳ ನಡೆದಿತ್ತು. ಬಳಿಕ ಈ ವಿಚಾರವಾಗಿ ವೇಮಗಲ್ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯ್ತಿ ನಡೆದಿತ್ತು.
ಈ ಮಧ್ಯೆ ದೂರು ನೀಡಿದ ಯುವಕ ಗಂಗರಾಜು ಎಂಬವರನ್ನು ಪೋಲೀಸರು ಥಳಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಸೋಮವಾರ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಇದೇ ಕಾರಣಕ್ಕೆ ಸೋಮವಾರ ರಾತ್ರಿ ಗ್ರಾಮದಲ್ಲಿ ಉಭಯ ಕುಟುಂಬಗಳ ನಡುವೆ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ. ಗಲಾಟೆ ವೇಳೆ ವೆಂಕಟಲಕ್ಷ್ಮಮ್ಮ ಮೃತಪಟ್ಟಿದ್ದು, ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಮೃದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
ಗ್ರಾಮದ ಆಂಜಪ್ಪ, ಮಂಜುನಾಥ್, ವೆಂಕಟೇಶ್ ಸೇರಿ ಹಲವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.






