ಪರಿಸರದ ಬಗ್ಗೆ ಬದ್ಧತೆ ಇದ್ದರೆ ಬದುಕು ಪರಿಶುದ್ಧ: ಡಾ. ಶ್ರೀನಿವಾಸ ಪ್ರಸಾದ್

ಕೋಲಾರ: ಬಂಗಾರಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಕೋರ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 'ಕನ್ನಡ ಕಾವ್ಯಗಳಲ್ಲಿ ಪರಿಸರದ ಪ್ರಜ್ಞೆ' ಎಂಬ ವಿಷಯದ ಕುರಿತು ಸಾಹಿತಿ ಡಾ. ಶ್ರೀನಿವಾಸ ಪ್ರಸಾದ್ ಉಪನ್ಯಾಸ ನೀಡಿದರು.
ಪರಿಸರದ ಬಗೆಗಿನ ಕಾಳಜಿ ಮನೆಗಳಿಂದಲೇ ಆರಂಭವಾಗಿ ಜಗತ್ತಿನ ಸುವ್ಯವಸ್ಥಿತ ನೆಲೆಗೆ ಕಾರಣವಾಗಬೇಕು. ಪಂಪ, ರನ್ನ, ಪೊನ್ನ, ಕೆ.ಎಸ್.ನ. ಮೊದಲಾದವರು ಪರಿಸರದ ಬಗ್ಗೆ ಅಭಿಮಾನ, ಗೌರವ ಹಾಗೂ ಕಾಳಜಿಯನ್ನು ಹೊಂದಿದ್ದರು ಎಂದು ಅವರು ನುಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಕೋರ ಬಳಗದ ಸಂಸ್ಥಾಪಕ ಅಧ್ಯಕ್ಷ ಜ.ಮು. ಚಂದ್ರ, ವಿದ್ಯಾರ್ಥಿಗಳ ಮನಸ್ಸು ಹುಚ್ಚು ಕುದುರೆಯಂತಿದ್ದು, ಅದನ್ನು ನಿಯಂತ್ರಿಸಿಕೊಂಡು ಈಗಿನಿಂದಲೇ ಪರಿಸರದ ಬಗ್ಗೆ ಕರ್ತವ್ಯಪ್ರಜ್ಞೆ ರೂಢಿಸಿಕೊಳ್ಳಬೇಕು. ಕಾರ್ಯಪ್ರವೃತ್ತರಾಗಿ ನಾಡಿಗೆ, ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಿಕೇತನ ಬಳಗದ ರಾಮಪ್ರಸಾದ್, ಬಂಗಾರಪೇಟೆ ಹಾಗೂ ಕೋಲಾರ ಜಿಲ್ಲೆಯಾದ್ಯಂತ ತಾವು ದಶಕಗಳಿಂದ ನಡೆಸಿಕೊಂಡು ಬಂದ ಕನ್ನಡಪರ ಕಾರ್ಯಕ್ರಮಗಳನ್ನು ಸ್ಮರಿಸಿ, ಇಂದಿನ ಪರಿಸ್ಥಿತಿಯಲ್ಲಿ ಯುವಜನರಲ್ಲಿ ಪರಿಸರದ ಉಳಿವಿನ ಬಗ್ಗೆ ಎಚ್ಚರ ಹಾಗೂ ನಿಷ್ಠೆ ಮೂಡಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಒಡಮೂಡಬೇಕಾದುದು ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಾಗಾನಂದ ಕೆಂಪರಾಜ್, ಕುವೆಂಪು, ನಿಸಾರ್ ಅಹ್ಮದ್, ಕೆ.ಎಸ್.ನ. ಮೊದಲಾದವರು ತಮ್ಮ ಬದುಕು-ಬರೆಹಗಳಲ್ಲಿ ನಿಸರ್ಗದ ಸೌಂದರ್ಯ, ಔಚಿತ್ಯ ಹಾಗೂ ಶ್ರೇಷ್ಠತೆಯನ್ನು ಪ್ರತಿಪಾದಿಸಿದ್ದಾರೆ. ನಿತ್ಯೋತ್ಸವದ ಹರಿದ್ವರ್ಣದ ಪರಿಸರವನ್ನು ವರ್ಣಿಸಿರುವ ಕನ್ನಡದ ಕವಿಗಳ ಸತ್ವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು 'ಹಸಿರೇ ಉಸಿರು' ಎಂಬುದನ್ನು ಸಾರ್ಥಕಗೊಳಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಹನ, ಸುಧಾಕರ್ ಹಾಗೂ ರವಿಚಂದ್ರ ಹಾಡಿದರು. ಉಪನ್ಯಾಸಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು.






