ಬಸರಿಹಾಳ| ಕೆರೆ ತುಂಬಿ ರಸ್ತೆಗೆ ಆವರಿಸಿದ ನೀರು: ಜನರ ಪರದಾಟ

ಕನಕಗಿರಿ: ತಾಲೂಕಿನ ಬಸರಿಹಾಳ ಗ್ರಾಮದ ಕೆರೆ ತುಂಬಿ ಹರಿಯುತ್ತಿದ್ದು ರಸ್ತೆ ಸಂಚಾರಕ್ಕೆ ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ.
ಕೆರೆಯ ನೀರು ಗೌರಿಪುರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಹರಿಯುತ್ತಿದ್ದು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಇತರೆ ವಾಹನಗಳ ಚಾಲಕರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ರಸ್ತೆಯಲ್ಲಿ ಹಾಕಿದ ಡಾಂಬರೀಕರಣ ಕಿತ್ತಿಕೊಂಡು ಹೋಗಿದ್ದು ಬೃಹತ್ ಪ್ರಮಾಣದ ಗುಂಡಿಗಳು ಬಿದ್ದಿದೆ. ರಸ್ತೆ ದಾಟಲು ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಕನಕಪ್ಪ ಕುಟುಗಮರಿ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಯಾಗಿರುವ ಬಾಲಪ್ಪ, ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಹಾಗೂ ರಸ್ತೆ ಹದಗೆಟ್ಟಿರುವುದರಿಂದ ಯಲಬುರ್ಗಾದಿಂದ ಕನಕಗಿರಿಗೆ ಬಸ್ ಗಳ ಓಡಾಟ ಸ್ಥಗಿತಗೊಂಡಿದೆ. ಬಸರಿಹಾಳದಿಂದ ಗೌರಿಪುರದ ರಸ್ತೆ ಮೂಲಕ ಹೋಗುವ ಬದಲಾಗಿ ಬೈಲಕ್ಕುಂಪುರ ಗ್ರಾಮದ ಮೂಲಕ ಕನಕಗಿರಿ, ಯಲಬುರ್ಗಾಕ್ಕೆ ಹೋಗಲಾಗುತ್ತಿದೆ. ಇದರಿಂದ ಬಸರಿಹಾಳ ಗ್ರಾಮದ ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
"ಕೆರೆಯ ನೀರು ಸುತ್ತಮುತ್ತಲ್ಲಿನ ಹೊಲಗಳಿಗೂ ಹರಿದು ಬೆಳೆಗಳಿಗೂ ಹಾನಿಯಾಗಿದೆ. ರೈತರು ಬೆಳೆ ಕಟಾವ್ ಮಾಡುವ ಸಮಯದಲ್ಲಿ ನೀರು ಹೊಲದಲ್ಲಿ ನಿಂತಿರುವುದರಿಂದ ಸಮಸ್ಯೆಯಾಗಿದೆ" ಎಂದು ರೈತ ಕನಕಪ್ಪ ಕುಟಗಮರಿ ಅಳಲು ತೋಡಿಕೊಂಡಿದ್ದಾರೆ.







