ಬಿಜೆಪಿ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ: ಸಚಿವ ಶಿವರಾಜ್ ತಂಗಡಗಿ

ಕೊಪ್ಪಳ: ಜ.11: ಬಿಜೆಪಿ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಉಳಿಸಲು ಬೇಕಾದ ಯೋಜನೆಗಳನ್ನು ಮಾತ್ರ ಮೋದಿ ಸರಕಾರ ರೂಪಿಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್.ಎಸ್.ತಂಗಡಗಿ ಹೇಳಿದ್ದಾರೆ.
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶಿವರಾಜ್.ಎಸ್.ತಂಗಡಗಿ, ಮಹಾತ್ಮಾ ಗಾಂಧಿ ಅವರ ಬಗ್ಗೆ ಬಿಜೆಪಿಗರು ಬಾಯಿ ಮಾತಿಗಷ್ಟೇ ಮಾತನಾಡುತ್ತಾರೆ. ಇವರದ್ದು ಜನರಿಂದ ಆಯ್ಕೆಯಾಗಿ ಬಂದ ಸರಕಾರ ಅಲ್ಲ, ಮತಗಳ್ಳತನದಿಂದ ಅಧಿಕಾರಕ್ಕೆ ಬಂದಿರುವ ಸರಕಾರ. ಬಿಜೆಪಿ ಜನರ, ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ. ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ರಾಮನಿಗೂ ತೃಪ್ತಿ ತರುವ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಹೇಳಿದರು.
ಆರೆಸ್ಸೆಸ್ ಒತ್ತಾಯಕ್ಕೆ ಮಣಿದು ಬಿಜೆಪಿಗರು ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮನುಸ್ಮೃತಿ ಮನಸ್ಥಿತಿಯುಳ್ಳವರು ದಲಿತರು, ಮಹಿಳೆಯರು ಹಾಗೂ ಸಾಮಾನ್ಯರು ನೆಮ್ಮದಿಯಾಗಿ ಬದುಕುವುದನ್ನು ಇಷ್ಟಪಡುವುದಿಲ್ಲ. ಇಂತಹ ಕಾಯ್ದೆ ಪಾಸ್ ಮಾಡಿಕೊಳ್ಳುವ ಮೂಲಕ ದೇಶದ 12.16 ಕೋಟಿ ಕಾರ್ಮಿಕರನ್ನು ಅವರಲ್ಲಿ ಶೇ.53.61ರಷ್ಟು ಸಂಖ್ಯೆಯಲ್ಲಿದ್ದ 6.21 ಕೋಟಿ ಮಹಿಳೆಯರ ಬದುಕನ್ನು ಹಾಗೂ ಶೇ.17ಪರಿಶಿಷ್ಟ ಜಾತಿ ಮತ್ತು ಶೇ.11ಪರಿಶಿಷ್ಟ ಪಂಗಡ ನರೇಗಾ ಕೂಲಿ ಕಾರ್ಮಿಕರ ಬದುಕಿಗೆ ಬೆಂಕಿ ಇಟ್ಟಿದೆ ಎಂದು ಟೀಕಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ಇದು ಮಹತ್ತರವಾದ ಯೋಜನೆಯಾಗಿತ್ತು. ಶೇ.71.18 ಲಕ್ಷ ಮಂದಿ ನರೇಗಾ ಯೋಜನೆಯ ಅನುಕೂಲ ಪಡೆಯುತ್ತಿದ್ದರು. ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಯುಪಿಎ ಸರಕಾರ ದೇಶದಲ್ಲಿ ಉದ್ಯೋಗ, ಶಿಕ್ಷಣ, ಆಹಾರದ ಹಕ್ಕಿನಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿತ್ತು. ಮೋದಿ ಸರಕಾರ ಸುಳ್ಳು ಪ್ರಚಾರ ಮಾಡುವ ಮೂಲಕ ಈ ಯೋಜನೆಗಳನ್ನು ವಿಫಲಗೊಳಿಸುವ ಕೆಲಸ ಮಾಡುತ್ತಾ ಬಂದಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಉಳಿಸಲು ಬೇಕಾದ ಯೋಜನೆಗಳನ್ನು ಮಾತ್ರ ಮೋದಿ ಸರಕಾರ ರೂಪಿಸುತ್ತಿದೆ. ಸಾಮಾನ್ಯ ಜನರ ಬದುಕಿನ ಬಗ್ಗೆ ಈ ಸರಕಾರಕ್ಕೆ ಕಾಳಜಿ ಇಲ್ಲ. ಜೀತಾ ಪದ್ಧತಿಯನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯುಪಿಎ ಸರಕಾರ ಜಾರಿಗೆ ತಂದಿದ್ದ ನಿರ್ಮಲಾ ಭಾರತ ಯೋಜನೆಯನ್ನು ಸ್ವಚ್ಛ ಭಾರತ , ಇಂದಿರಾ ಅವಾಸ್ ಯೋಜನೆಗೆ ಪ್ರಧಾನಮಂತ್ರಿ ಅವಾಸ್ ಯೋಜನೆ ಎಂದು ಬದಲಾವಣೆ ಮಾಡಿದ್ದಾರೆ. ಯಾವುದೇ ಹೊಸ ಯೋಜನೆಯನ್ನು ಜಾರಿಗೆ ತಂದಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ ಮಾಡುವ ಬದಲಿಗೆ ಬೇರೊಂದು ಜನಪರ ಯೋಜನೆ ತರಬಹುದಿತ್ತು ಎಂದು ತಿಳಿಸಿದರು.
ಬಿಜೆಪಿಗರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಗಾಂಧಿಜಿ ಅವರ ಹೆಸರಿರುವ ಯೋಜನೆಯ ಹೆಸರು ಬದಲಾವಣೆ ಏಕೆ? ಹೆಸರು ಬದಲಾವಣೆ ಮಾಡುವ ಮೂಲಕ ಗಾಂಧಿಜಿ ಅವರ ಬಗ್ಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಎಂಬುದು ತಿಳಿಯುತ್ತಿದೆ ಎಂದು ಹೇಳಿದರು.
ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಇವರು ಅನುದಾನ ನೀಡುವುದು ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ಮಾತ್ರ. ಇದು ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯವಲ್ಲವೇ ? ಎಂದು ಸಚಿವರು ಪ್ರಶ್ನಿಸಿದರು.
ರೈಲ್ವೆ ಯೋಜನೆಯ ಕಾರ್ಯಕ್ರಮದ ಪೂಜಾ ವೇಳೆ ನಡೆದ ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾ ಬಿಜೆಪಿ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ತಮ್ಮ ವಿರುದ್ಧ ದೂರು ನೀಡಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ತಂಗಡಗಿ, ಶಿಷ್ಟಾಚಾರ ಪಾಲನೆ ಮಾಡುವಂತೆ ಕೇಳಲು ನಾನು ಹಕ್ಕುದಾರ, ನಾನು ಜನಪ್ರತಿನಿಧಿಯಾಗಿದ್ದೇನೆ. ಎಲ್ಲಿ ಕಾರ್ಯಕ್ರಮ ನಡೆಯಲಿದೆಯೋ ಅಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕು. ಸೋಮಣ್ಣ ನನ್ನ ಬಳಿ ಹೇಳಿದ ಮಾತು ಅಸಹ್ಯ ಅನಿಸುತ್ತದೆ. ರೈಲ್ವೆ ಅಧಿಕಾರಿಗಳು ನನ್ನ ಮಾತನ್ನೇ ಕೇಳುವುದಿಲ್ಲ ಎಂದರು. ಮತ್ತೇ ಇನ್ನು ಏಕೆ ಇವರು ಕೇಂದ್ರದಲ್ಲಿ ಮಂತ್ರಿಯಾಗಿರಬೇಕು. ಸ್ವತಃ ನಾನು ಅವರ ಬಳಿ ಮಾತನಾಡುತ್ತಾ, ನನ್ನ ಹಕ್ಕನ್ನು ಪ್ರತಿಪಾದಿಸಿದ್ದೇನೆ. ಹಿರಿಯ ನಾಯಕರು ಸೋಮಣ್ಣ. ನಿಮ್ಮ ನೇತೃತ್ವದಲ್ಲಿ ಈ ರೀತಿ ಕಾರ್ಯಕ್ರಮ ನಡೆಯುವುದು ನನಗೆ ನೋವಾಗುತ್ತದೆ ಎಂದು ಹೇಳಿದೆ ಇದು ತಪ್ಪಾ? ಯಾರೇ ಆದರೂ ಶಿಷ್ಟಾಚಾರ ಪಾಲನೆ ಆಗಬೇಕು. ಬಿಜೆಪಿಯವರಿಗೆ ಬುದ್ಧಿ ಕಡಿಮೆ. ಬಿಜೆಪಿ ಜಿಲ್ಲಾಧ್ಯಕ್ಷನಿಗೂ ಬುದ್ಧಿ ಕಡಿಮೆ ಎಂದು ವಾಗ್ದಾಳಿ ನಡೆಸಿದರು.







