ಕನಕಗಿರಿ ತಾಲ್ಲೂಕು ಬರಪೀಡಿತ ಘೋಷಣೆಗೆ ಸಿಪಿಐ(ಎಂ) ಆಗ್ರಹ

ಕನಕಗಿರಿ : ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಕನಕಗಿರಿ ತಾಲ್ಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸಿಪಿಐ(ಎಂ) ಕಾರ್ಯಕರ್ತರು ಗುರುವಾರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಶಿವಕುಮಾರ ಈಚನಾಳ, ಜುಲೈ ತಿಂಗಳು ಆರಂಭವಾದರೂ ಸಮರ್ಪಕ ಮಳೆಯಾಗಿಲ್ಲ. ಇದರಿಂದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದ್ದು, ಅಲ್ಪ ಮಳೆಗೆ ಬಿತ್ತಿದ ಬೆಳೆಗಳೂ ಒಣಗಿ ಹೋಗಿವೆ ಎಂದು ಹೇಳಿದರು.
ಜಾನುವಾರುಗಳಿಗೆ ಮೇವು ಕೊರತೆಯಾಗಿದ್ದು, ಗ್ರಾಮೀಣ ಜನರಿಗೆ ಉದ್ಯೋಗವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಸರ್ಕಾರ ಕೂಡಲೇ ರೈತರ ಹಾಗೂ ಸಾರ್ವಜನಿಕರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು, ಕೂಲಿಗಾಗಿ ಕಾಳು ಯೋಜನೆ ಜಾರಿಗೊಳಿಸುವುದು, ರೈತರ ಕೃಷಿ ಸಾಲ ಮನ್ನಾ ಮಾಡುವುದು, ಬರ ಪರಿಹಾರವನ್ನು ತಕ್ಷಣ ವಿತರಿಸುವುದು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಮೂಲ ಸ್ವರೂಪದಲ್ಲೇ ಮರುಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪ್ರಮುಖರಾದ ಪರಶುರಾಮ, ಮಲ್ಲಪ್ಪ ಮ್ಯಾಗಡೆ, ಪಾಮಣ್ಣ, ನಿಂಗಪ್ಪ, ಮೌಲಾಹುಸೇನ್ ಸುಳೆಕಲ್, ಶಿವಕುಮಾರ,ವೆಂಕಟೇಶ್ ಭಾವಿಕಟ್ಟಿ,ಕೆಂಚಪ್ಪ ಇದ್ದರು.






