’ದುಬೈ ದೌಲತ್ತು’ ಬರೀ ಪ್ರವಾಸೀ ಕಥನವಲ್ಲ-ಅನುಭವೀ ಕಥನವೂ ಕೂಡ: ಗವಿಸಿದ್ಧಪ್ಪ ಕೊಪ್ಪಳ

ಕೊಪ್ಪಳ : ನಗರದ ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ಹಿರಿಯ ವಾಣಿಜ್ಯೋದ್ಯಮಿಗಳಾದ ಮಲ್ಲಿಕಾರ್ಜುನ ಬಳ್ಳೊಳ್ಳಿಯವರು ಕವಿ ಮಹೇಶ ಬಳ್ಳಾರಿಯವರ ’ದುಬೈ ದೌಲತ್ತು’ ಪ್ರವಾಸೀ ಕಥನವನ್ನು ಲೋಕಾರ್ಪಣೆ ಮಾಡಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಗವಿಸಿದ್ಧಪ್ಪ ಕೊಪ್ಪಳ ಕೃತಿ ಕುರಿತು ಮಾತನಾಡಿ ಅವರು, ದುಬೈ ಪ್ರವಾಸ ಕಥನ ಅನುಭವೀ ಕಥನವಾಗಿದೆ. ಕವಿಯೊಬ್ಬ ಕಂಡ ಅನುಭವಗಳನ್ನು ಚಿತ್ರಿಸಿದ ರೀತಿ ಓದುಗರ ಗಮನ ಸೆಳೆಯುತ್ತದೆ. ಇದೊಂದು ಮಾರ್ಗದರ್ಶಿ ಕೃತಿಯೂ ಕೂಡ. ಕವಿಯ ಸೂಕ್ಷ್ಮ ಅವಲೋಕನಗಳನ್ನು ಕೃತಿಯಲ್ಲಿ ಕಾಣಬಹುದು ಎಂದರು.
ನಿವೃತ್ತ ಎಲ್.ಐ.ಸಿ. ಆಫೀಸರ್ ವೆಂಕಟೇಶ ಶ್ಯಾನಭಾಗ್ ಮಾತನಾಡಿ, ಈ ಕೃತಿಯು ದುಬೈ ಹೋಗಬೇಕಾದವರಿಗೆ ಸೂಕ್ತ ತಿಳುವಳಿಕೆ ನೀಡಿದೆ. ಅದ್ಭುತಗಳ ನಾಡು ದುಬೈ ಮೀನು ಹಿಡಿಯುವವರ ದೇಶವಾಗಿತ್ತು. ಇದೀಗ ಇಡೀ ಜಗತ್ತು ತನ್ನ ಕಡೆ ಸೆಳೆಯುವಂತಹ ನೆಲವಾಗಿದೆ. ದುಬೈ ಐತಿಹ್ಯಗಳೆಲ್ಲ ಈ ಪುಸ್ತಕದಲ್ಲಿ ಅಡಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಹೇಶ ಬಳ್ಳಾರಿಯವರ ’ನಾಡಕವಿತೆ’ ಯೂಟೂಬ್ ಚಾನೆಲ್ನ ’ಗಾಂಧೀಜಿ ಮತ್ತು ಕೊಪ್ಪಳ’ ವಿಡಿಯೋ ಕ್ಲಿಪ್ ನ್ನು ಶಿವಮೂರ್ತಿ ಹೊಸಮನಿ, ಆನಂದ ಗೊಂಡಬಾಳ, ಶರಣು ಉಂಕಿ ಉದ್ಘಾಟಿಸಿದರು.
ಕೃತಿಯ ಲೇಖಕರ ಮಹೇಶ ಬಳ್ಳಾರಿ ಪ್ರಾಸ್ತಾವಿಕ, ವೀರೇಶ ಕೊಪ್ಪಳ ನಿರ್ವಹಣೆ ನೆರವೇರಿಸಿದರು. ವೇದಿಕೆಯ ಮೇಲೆ ಪ್ರದೀಪ ಸೋಮಲಾಪುರ, ಡಿ.ಎಂ.ಬಡಿಗೇರ, ಡಾ.ಮಹಾಂತೇಶ ಮಲ್ಲನಗೌಡರ, ಗುರುರಾಜ ಹಲಗೇರಿ ಉಪಸ್ಥಿತರಿದ್ದರು.
ವಿಶ್ವನಾಥ ಬಳ್ಳೊಳ್ಳಿ, ಈರಣ್ಣ ಸಂಕ್ಲಾಪುರ, ಈಶ್ವರ ಹತ್ತಿ, ಮಲ್ಲಿಕಾರ್ಜುನ ಪಾಟೀಲ, ಅಮರದೀಪ, ಶಿ.ಕಾ.ಬಡಿಗೇರ, ವೀರಣ್ಣ ನಿಂಗೋಜಿ, ಮಹಾದೇವ ಸತ್ತಿಗೇರಿ, ಅರುಣಾ ನರೇಂದ್ರ, ಅಮರೇಶ ಅಂಗಡಿ, ಮಹಾಂತೇಶ ನೀಲಗಣಿ, ಶಿವಪ್ರಸಾದ ಹಾದಿಮನಿ ಮೊದಲಾದವರು ಭಾಗವಹಿಸಿದ್ದರು.