ಕೊಪ್ಪಳ: ಗಾಂಜಾ ಸೇವಿಸುತ್ತಿದ್ದ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು, ಮಾರಾಟಗಾರನ ಬಂಧನ

ಗಂಗಾವತಿ : ಸಂಗಾಪೂರ ಸೀಮಾದ ಲಕ್ಷ್ಮೀ ನಾರಾಯಣ ಕೆರೆಯ ದಡದ ಬಳಿ ಗಾಂಜಾ ಸೇವಿಸುತ್ತಾ ನಿಂತಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಮಾರಾಟಗಾರನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ 8.30ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ತೆರಳಿದ ಪೋಲಿಸರು ಮಲ್ಲಾಪೂರ ಗ್ರಾಮದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಾದ ಬಸನಗೌಡ (21) ಮತ್ತು ಕಿರಣ್ ಕುಮಾರ (20) ಎನ್ನುವ ವಿದ್ಯಾರ್ಥಿಗಳು ಗಾಂಜಾ ಸೇವನೆಯಲ್ಲಿ ನಿರತರಾಗಿದ್ದ ವೇಳೆ ವಶಕ್ಕೆ ಪಡೆದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು, ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.
ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ಐ ವೆಂಕಟೇಶ ಚೌವ್ಹಾಣ ನೀಡಿದ ದೂರಿನ ಆಧಾರದಲ್ಲಿ ದಿ.22.07.25ರಂದು ಗುನ್ನೆ ನಂ : 206/2025 ಕಲಂ : 27(b), 20(b)(ii)(A) NDPS Act-1985 ರ ಅಡಿ ಪ್ರಕರಣ ದಾಖಲಾಗಿತ್ತು.
ವಿಚಾರಣೆಯ ವೇಳೆ ಕಾರಟಗಿ ತಾಲೂಕಿನ ತೊಂಡಿಹಾಳ ಗ್ರಾಮದ ಹನುಮಗೌಡ ಗಾಂಜಾ ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆತನನ್ನೂ ಬಂಧಿಸಲಾಗಿದೆ. ಆತನ ಬಳಿ ಇದ್ದ ಒಟ್ಟು 129 ಗ್ರಾಂ ತೂಕದ 7ಸಾವಿರ ಬೆಲೆಯ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಮೇಲೆ ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿದೆ.







