ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣ| ಕೊಲೆ ಹಿಂದೆ ಇರುವ ಕಾಣದ ಕೈಗಳಿಗೆ ಶಿಕ್ಷೆಯಾಗಬೇಕು: ಶ್ರೀ ರಾಮುಲು

ಕೊಪ್ಪಳ: ಗವಿಸಿದ್ದಪ್ಪ ಎಂಬ ಯುವಕನ ಕೊಲೆಹಿಂದೆ ಇರುವ ಕಾಣದ ಕೈಗಳಿಗೆ ಶಿಕ್ಷೆಯಾಗಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಹೇಳಿದರು.
ಮಂಗಳವಾರ ಮೃತ ಗವಿಸಿದ್ದಪ್ಪ ನಾಯಕ್ ಅವರ ಕುಟುಂಬವನ್ನು ಭೇಟಿ ಮಾಡಿ, ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಎಸ್ಪಿ ಅವರು ಗಂಟೆಗೊಂದು ಮಾತು ಹೇಳುತ್ತಾರೆ. ರಾತ್ರೋ ರಾತ್ರಿ ಮರಣೋತ್ತರ ಪರೀಕ್ಷೆ ಮಾಡಿಸುತ್ತಾರೆ. ಮರುದಿನವೇ ಅಂತ್ಯ ಸಂಸ್ಕಾರ ಮಾಡಿಸುವ ಅವಸರ ಎಸ್ ಪಿ ಅವರಿಗೆ ಏನಿತ್ತು ? ಅಷ್ಟಕ್ಕೂ ಸಾದಿಕ್ ಎನ್ನುವ ಯುವಕನಿಗೆ ಊರಿನ ಮಧ್ಯೆ ಕೊಲೆ ಮಾಡುವ ಧೈರ್ಯ ಎಲ್ಲಿಂದ ಬಂತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗವಿಸಿದ್ದಪ್ಪ ಅವರ ಆತ್ಮ ಶಾಂತಿಗೆ ಎಲ್ಲರೂ ಜಾತ್ಯಾತೀತವಾಗಿ ನಿಂತು ಸಾದಿಕ್ ಮತ್ತು ಅವನಿಗೆ ಸಹಕರಿಸಿದವರಿಗೆ ಗಲ್ಲು ಶಿಕ್ಷೆ ಆಗುವವರೆಗೆ ಹೋರಾಡುತ್ತೇವೆ. ಈ ಹೋರಾಟ ಇಲ್ಲಿಗೆ ನಿಲ್ಲೊಲ್ಲ. ನಮ್ಮ ಸಮುದಾಯ ಒಂದು ನಿರ್ಣಯವನ್ನು ತೆಗೆದುಕೊಂಡಿದೆ. ಈ ಕುರಿತು ಶುಕ್ರವಾರ (ಆ.8)ರಂದು ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಡೆಸುಗೂರು, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಬಸವರಾಜ್ ಕ್ಯಾವಟರ್, ಮಲ್ಲಿಕಾರ್ಜುನ ಸ್ವಾಮಿ, ವಾಲ್ಮಿಕಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್ ಪಾಟೀಲ್, ಶರಣು ,ನಾಗರಾಜ್, ಗಿರಿಯಪ್ಪ ಬೂದುಗುಂಪ ಮತ್ತು ಸುರೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.







