Kanakagiri | ಅಮೃತ 2.0 ಅನುದಾನ ಕೇಂದ್ರ ಸರ್ಕಾರದ್ದು: ತಂಗಡಗಿ ವಿರುದ್ಧ ದಡೇಸೂಗೂರು ವಾಗ್ದಾಳಿ

ಕನಕಗಿರಿ : ಅಮೃತ 2.0 ಯೋಜನೆಯಡಿ ದೊರೆತಿರುವ 202 ಕೋಟಿ ರೂ. ಅನುದಾನ ಕೇಂದ್ರ ಸರ್ಕಾರದದ್ದಾಗಿದ್ದು, ಅದು ರಾಜ್ಯ ಸರ್ಕಾರದ ಸಾಧನೆಯಲ್ಲ ಎಂದು ಮಾಜಿ ಶಾಸಕ ಬಸವರಾಜ ದಡೇಸೂಗೂರು ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ನವಲಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವರಾಜ ತಂಗಡಗಿ ಅವರು ‘ನಾನು 400 ಕೋಟಿ ರೂ. ತಂದು ರಸ್ತೆ ಅಭಿವೃದ್ಧಿ ಮಾಡಿದ್ದೇನೆ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಗ್ರಾಮಗಳಲ್ಲಿ ನಿರ್ಮಿಸಿರುವ ಡಾಂಬರ್ ಹಾಗೂ ಸಿಸಿ ರಸ್ತೆಗಳು ಕಳಪೆ ಕಾಮಗಾರಿಯಿಂದ ಕೂಡಿವೆ ಎಂದು ಆರೋಪಿಸಿದರು.
ಕೆಲ ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳ ಗುಣಮಟ್ಟ ಸಮರ್ಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳನ್ನು ಪುನಃ ನಿರ್ಮಿಸುವಂತೆ ತಾವೇ ಸೂಚನೆ ನೀಡಿದ್ದಾಗಿ ತಿಳಿಸಿದರು.
ಮುಷ್ಟೂರು, ಬೇವಿನೂರು ಹಾಗೂ ಹಣವಾಳ ಗ್ರಾಮಗಳಿಗೆ 110 ಕೆವಿ ವಿದ್ಯುತ್ ಉಪಕೇಂದ್ರ ಮಂಜೂರು ಮಾಡಿಸಿದ್ದು ತಾವು ಎಂದು ಹೇಳಿದ ಅವರು, ಗುಬ್ಬಿಗೆ ಕುಡಿಯುವ ನೀರು ತರುವ ಕೆಲಸವನ್ನು ತಂಗಡಗಿ ಮಾಡಿರಬಹುದು. ಆದರೆ ರೈತರ ಬದುಕಿಗೆ ಅನುಕೂಲವಾಗುವ ನೀರಾವರಿ ಯೋಜನೆಗಳನ್ನು ತಾವು ಜಾರಿಗೆ ತಂದಿದ್ದರಿಂದ ರೈತರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ಸೋಲು-ಗೆಲುವು ರಾಜಕೀಯದಲ್ಲಿ ಸಾಮಾನ್ಯ. 2028ರ ಚುನಾವಣೆಯಲ್ಲಿ ಜನರು ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಶಿವರಾಜ ತಂಗಡಗಿ ವಿರುದ್ಧ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಬಹಿರಂಗವಾಗಿ ನೀಡಲು ಸಿದ್ಧವಿದ್ದು, ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜಿಪಿ ಜಿಲ್ಲಾ ಉಪಾಧ್ಯಕ್ಷ ಮನೋಹರ ಗೌಡ ಹೆರೂರು, ಮಂಡಲ ಅಧ್ಯಕ್ಷ ಸಣ್ಣಕನಕಪ್ಪ, ಉಪಾಧ್ಯಕ್ಷ ನಿಂಗಪ್ಪ ನಾಯಕ, ಪ್ರಮುಖರಾದ ಪ್ರಕಾಶ ಹಾದಿಮನಿ, ನಾಗರಾಜ ಬಿಲ್ದಾರ್, ಶರತಚಂದ್ರ ನಾಯಕ, ಗ್ಯಾನಪ್ಪ ಖ್ಯಾಡೇದ, ರಂಗಪ್ಪ ಕೊರಟಗಿ, ಶೇಷಪ್ಪ ಪೂಜಾರ, ಸುರೇಶ ಗುಗ್ಗಳಶೇಟ್ರ, ನರಸಪ್ಪ ನಾಯಕ, ಯಮನೂರು ಇದ್ಲಾಪೂರ, ಹುಲಿಗೇಮ್ಮ ಇತರರು ಇದ್ದರು.






