Kanakagiri | ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ : ನಾಗಪ್ಪ

ಕನಕಗಿರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕನಕಗಿರಿ ತಾಲೂಕು ಹಾಗೂ ಬಸರಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಮುಖ್ಯೋಪಾಧ್ಯಾಯ ನಾಗಪ್ಪ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ನಾವು ಪರಿಸರ ಉಳಿಸಿದರೆ ಮುಂದಿನ ಪೀಳಿಗೆಯೂ ಪರಿಸರವನ್ನು ಪ್ರೀತಿಸುತ್ತದೆ ಎಂದರು.
ಮಾಜಿ ಗ್ರಾ.ಪಂ. ಸದಸ್ಯ ಹೊಳೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಪ್ರತಿನಿತ್ಯ ಪರಿಸರ ರಕ್ಷಣೆಗೆ ಮುಂದಾಗಬೇಕು. ಗೋಮಾಳ, ದೇವಸ್ಥಾನ, ಶಾಲಾ ಆವರಣ, ಕೆರೆ, ತೋಟಗಳಲ್ಲಿ ಹೆಚ್ಚು ಗಿಡ ನೆಡಬೇಕು. ಇಲ್ಲದಿದ್ದರೆ ಮುಂದೆ ಬರ, ಬಿಸಿಲು ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಶಾಲಾ ಮಕ್ಕಳಿಗೆ ಸಸಿ ನೆಡುವ ಮೂಲಕ ಪರಿಸರ ಅರಿವು ಮೂಡಿಸಲಾಯಿತು.
ಮುಖ್ಯಶಿಕ್ಷಕ ಧರ್ಮಣ್ಣ ಲಮಾಣಿ, ಸಹ ಶಿಕ್ಷಕ ಯಮುನೂರಪ್ಪ, ಎಸ್ಡಿಎಂಸಿ ಅಧ್ಯಕ್ಷ ಪರುಶುರಾಮ ಓಜರಬಂಡಿ, ಉಪಾಧ್ಯಕ್ಷ ನಾಗಪ್ಪ ಗದ್ದಿ, ಉಮೇಶ್, ಕೃಷಿ ಮೇಲ್ವಿಚಾರಕ ಎನ್. ಗಂಗಾಧರಪ್ಪ, ವಲಯ ಮೇಲ್ವಿಚಾರಕ ಯಲರಿ ಶಿವಾಜಿ, ಸೇವಾ ಪ್ರತಿನಿಧಿ ಪ್ಯಾರಿ ಬೇಗಂ, ಸ್ವಸಹಾಯ ಸಂಘದ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.






