Kanakagiri | ಅದ್ದೂರಿಯಾಗಿ ನಡೆದ ತೊಂಡಿತೇವರಪ್ಪ ರಥೋತ್ಸವ

ಕನಕಗಿರಿ: ಪಟ್ಟಣದ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ಗುಡ್ಡದ ಮೇಲಿರುವ ತೊಂಡಿತೇವರಪ್ಪ (ಕಂಠೀರಂಗನಾಥ) ದೇವರ ರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಅಭಿಷೇಕ, ಪಂಚಾಮೃತ, ಪುಷ್ಪಾರ್ಚನೆ, ಬೆಳ್ಳಿ ಆಭರಣ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥದ ಮುಂಭಾಗದಲ್ಲಿ ಹೋಮ, ಹವನ ಹಾಗೂ ಅನ್ನಬಲಿ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಭಕ್ತರು ದೇವರಿಗೆ ತಾವು ಹರಕೆ ಹೊತ್ತಿದ್ದ ವಿವಿಧ ಸಾಮಗ್ರಿಗಳನ್ನು ಅರ್ಪಿಸಿ, ದಿಂಡ ನಮಸ್ಕಾರ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ದೇವಸ್ಥಾನ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ವಿಶೇಷವಾಗಿ ಮುಂಗೈ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದೇವಸ್ಥಾನದ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿತ್ತು.
ಸಂಜೆ ಸುಮಾರು 5.10ಕ್ಕೆ ರಥೋತ್ಸವ ಆರಂಭವಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳು ಹಾಗೂ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡರು. ರಥದ ಮುಂಭಾಗದಲ್ಲಿ ಡೊಳ್ಳು ಕುಣಿತ, ತಾಷಾ ಮೇಳ ಹಾಗೂ ಯುವಕರ ನಾನಾ ಭಂಗಿಯ ನೃತ್ಯಗಳು ನೋಡುಗರ ಗಮನ ಸೆಳೆದವು. ಭಕ್ತರು ರಥದತ್ತ ಹುತ್ತುತ್ತಿ ಹಾಗೂ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಮೆರೆದರು.
ದೇವಸ್ಥಾನದ ಸುತ್ತಮುತ್ತಲಿನ ಅಂಗಡಿ-ಮುಂಗಟ್ಟುಗಳಲ್ಲಿ ಮಹಿಳೆಯರು, ಮಕ್ಕಳು ಹಾಗೂ ಯುವಕರು ಆಟಿಕೆಗಳು, ತಿಂಡಿ-ತಿನಿಸುಗಳನ್ನು ಖರೀದಿಸುತ್ತಿರುವುದು ಕಂಡುಬಂತು. ಗೆಳೆಯರು ಹಾಗೂ ಕುಟುಂಬ ವರ್ಗದವರು ಒಂದೆಡೆ ಸೇರಿ ಮಂಡಕ್ಕಿ, ಕಾರ, ಮಿರ್ಚಿ, ವಡಾ ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿದರು.
ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ತಾಲೂಕುಗಳಿಂದ ಭಕ್ತರು ಆಗಮಿಸಿದ್ದರು. ಕೊಪ್ಪಳ, ರಾಯಚೂರು, ಬಳ್ಳಾರಿ, ಹೊಸಪೇಟೆ, ಧಾರವಾಡ, ಹುಬ್ಬಳ್ಳಿ, ವಿಜಯನಗರ, ಬಾಗಲಕೋಟೆ, ಸಿರುಗುಪ್ಪ, ಸಿಂಧನೂರು ಸೇರಿದಂತೆ ವಿವಿಧ ಜಿಲ್ಲೆಗಳ ಜನರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಪಪಂ ಸದಸ್ಯರು, ವಿವಿಧ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಕೂಡ ರಥೋತ್ಸವದಲ್ಲಿ ಭಾಗವಹಿಸಿದ್ದರು.






