ಕನಕಗಿರಿ | ಸೇತುವೆ ದುರಸ್ಥಿಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಅಗ್ರಹ

ಕನಕಗಿರಿ: ಪಟ್ಟಣದ 6 ಮತ್ತು 7ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಸೇತುವೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣಗೌಡ ಬಣ)ಯ ಪದಾಧಿಕಾರಿಗಳು ಪಟ್ಟಣ ಪಂಚಾಯಿತ್ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜು, ಚೆನ್ನಶ್ರೀ ಪಿಯು ಕಾಲೇಜು, ಗೋರಳಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ರುದ್ರಸ್ವಾಮಿ ಪ್ರೌಢಶಾಲೆ, ಚೆನ್ನಮಲ್ಲಸ್ವಾಮಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗೋರಳಕೇರಿ ದುರುಗಮ್ಮ ದೇವಸ್ಥಾನಕ್ಕೆ ತೆರಳಲು ಅನುಕೂಲವಾಗುವಂತೆ 6 ಮತ್ತು 7 ವಾರ್ಡ್ ಮಧ್ಯೆ ಕಿರು ಸೇತುವೆ ನಿರ್ಮಾಣ ಮಾಡಲಾಗಿತ್ತು. ಸಾವಿರಾರು ಜನರು ಸೇತುವೆ ಮೂಲಕ ಸಂಚರಿಸುತ್ತಾರೆ. ಆದರೆ ಸೇತುವೆಗೆ ಹಾಕಿದ ಕಬ್ಬಿಣದ ಸರಳುಗಳು ಹಾಗೂ ಸಣ್ಣ ಕಬ್ಬಿಣದ ಪೈಪ್ ಗಳನ್ನು ಕಿಡಿಗೇಡಿಗಳು ಕಿತ್ತಿಕೊಂಡು ಹೋಗಿದ್ದಾರೆ. ಆದ್ದರಿಂದ ಸೇತುವೆಯನ್ನು ಶೀಘ್ರವಾಗಿ ದುರಸ್ಥಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಹರೀಶ್ ಪೂಜಾರ, ಸಂಘಟನೆಯ ಪದಾಧಿಕಾರಿಗಳಾದ ದೇಸಾಯಿಗೌಡ, ರವಿ ಬಲಿಜ, ಬಸವರಾಜ ಕೋರಿ, ಅಂಬರೇಶ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಹಾದಿಮನಿ, ವಿಷ್ಣುವರ್ಧನ ರೆಡ್ಡಿ ಮಾದಿನಾಳ, ಖಾದರಬಾಷ ಇಟ್ಟಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





