Kanakagiri | ವಿದ್ಯುತ್ ತಂತಿ ಬಿದ್ದು ಎತ್ತು ಸಾವು

ಕನಕಗಿರಿ : ತಾಲೂಕಿನ ಹಿರೇಖೇಡ-ಗುಡದೂರು ರಸ್ತೆಯಲ್ಲಿ ಸರ್ವಿಸ್ ವಿದ್ಯುತ್ ತಂತಿ ಎತ್ತಿನ ಮೇಲೆ ಬಿದ್ದ ಪರಿಣಾಮ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.
ಹಿರೇಖೇಡ ಗ್ರಾಮದ ರೈತ ಅಯ್ಯಪ್ಪ ನಾಯಕ ಅವರು ತಮ್ಮ ಜಮೀನಿನಲ್ಲಿ ಬಿತ್ತನೆ ಕಾರ್ಯ ಮುಗಿಸಿ ಎತ್ತಿನೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಅಕಸ್ಮಿಕವಾಗಿ ಸರ್ವಿಸ್ ವಿದ್ಯುತ್ ತಂತಿ ಎತ್ತಿನ ಮೇಲೆ ಬಿದ್ದಿದೆ. ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿತ್ತನೆ ಅವಧಿಯಲ್ಲೇ ಎತ್ತನ್ನು ಕಳೆದುಕೊಂಡಿರುವ ರೈತ ಅಯ್ಯಪ್ಪ ನಾಯಕ ಕಂಗಾಲಾಗಿದ್ದಾರೆ.
ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ನಾಗರಾಜ ಇದ್ಲಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story




