ಕನಕಗಿರಿ | ಶಾಲಾ ಮಕ್ಕಳು, ಪ.ಪಂ. ಸದಸ್ಯ ಸೇರಿ 8 ಮಂದಿಗೆ ಹುಚ್ಚು ನಾಯಿ ಕಡಿತ

ಸಾಂದರ್ಭಿಕ ಚಿತ್ರ
ಕನಕಗಿರಿ : ಪಟ್ಟಣದ 2ನೇ ವಾರ್ಡ್ನ ಗೌಡರ್ ಓಣಿಯಲ್ಲಿ ಹುಚ್ಚು ನಾಯಿ ದಾಳಿ ನಡೆಸಿದ ಪರಿಣಾಮ 8 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಗೌಡರ್ ಓಣಿಯ ನಿವಾಸಿ ಹಾಗೂ ಪ.ಪಂ ಸದಸ್ಯರಾದ ಶರಣೇಗೌಡ ಪಾಟೀಲ್ ಅವರಿಗೆ ಬೆಳಿಗ್ಗೆ ಮೊದಲು ಹುಚ್ಚು ನಾಯಿ ಕಡಿದಿದೆ. ನಂತರ ಪೌರ ಕಾರ್ಮಿಕ ಬಸವರಾಜ, 3 ವರ್ಷದ ಬಾಲಕಿ ಯುವನ್, ನಂದೀಶ (5), ವೀರೇಶ (25), 9ನೇ ವಾರ್ಡ್ ನಿವಾಸಿ ನಾಫಿಜಾನ್ (14) ಸೇರಿದಂತೆ ಇನ್ನಿತರರಿಗೆ ದಾಳಿ ನಡೆಸಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ನಾಫಿಜಾನ್ಗೆ ನಾಯಿ ಕಡಿದಿದೆ ಎನ್ನಲಾಗಿದೆ.
ಇದೇ ವೇಳೆ ಬಸವಂತಪ್ಪ ಸೇರಿದಂತೆ ಇನ್ನೂ ಕೆಲವರಿಗೆ ನಾಯಿ ದಾಳಿ ಮಾಡಿದ್ದು, ಎಲ್ಲರೂ ಗಾಯಗೊಂಡಿದ್ದಾರೆ.
ಹುಚ್ಚು ನಾಯಿ 2ನೇ ವಾರ್ಡ್ನ ಸಚ್ಚಿದಾನಂದ ಮಠ, ಬಸ್ ನಿಲ್ದಾಣ ರಸ್ತೆ ಹಾಗೂ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಭೀತಿ ಸೃಷ್ಟಿಸಿತ್ತು. ನಂತರ ಯುವಕರ ಗುಂಪೊಂದು ನಾಯಿಯನ್ನು ಬೆನ್ನಟ್ಟಿ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಎಲ್ಲಾ ವ್ಯಕ್ತಿಗಳನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.







