ಕನಕಗಿರಿ: ಕದ್ದ ವಾಹನದಿಂದ ಪೋಲಿಸ್ ವಾಹನಕ್ಕೇ ಢಿಕ್ಕಿ; ಆರೋಪಿ ಪರಾರಿ

ಕನಕಗಿರಿ: ಬೊಲೆರೊ ವಾಹನವನ್ನು ಕಳ್ಳತನ ಮಾಡಿಕೊಂಡು ಹುಲಿಹೈದರ ಮಾರ್ಗವಾಗಿ ತಾವರಗೇರಾ ಕಡೆಗೆ ಹೊರಟಿದ್ದ ವಾಹನ ಚಾಲಕನು 112 ತುರ್ತು ವಾಹನಕ್ಕೆ ಢಿಕ್ಕಿ ಹೊಡೆದು ವಾಹನ ಸಹಿತ ಪರಾರಿಯಾದ ಘಟನೆ ಜನವರಿ 12ರಂದು ಹುಲಿಹೈದರ ಹೊರವಲಯದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ತುರ್ತು ವಾಹನದ ಪೊಲೀಸರು ತಾವರಗೇರಾ-ಕನಕಗಿರಿ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದಾಗ, ಯಾರೋ ಕಳ್ಳರು ಬೋಲೆರೊ ಪಿಕ್ಅಪ್ ಸರಕು ಸಾಗಣೆ ವಾಹನವನ್ನು ಕಳ್ಳತನ ಮಾಡಿಕೊಂಡು ತಾವರಗೇರಾ ಕಡೆಗೆ ಹೋಗುತ್ತಿದ್ದಾರೆ ಎಂದು ತಿಳಿಸಿ, ಅದನ್ನು ತಡೆದು ನಿಲ್ಲಿಸಿ ಎಂದು ಕೊಪ್ಪಳ ಕಂಟ್ರೋಲ್ ರೂಂನಿಂದ ದೂರವಾಣಿ ಕರೆ ಬಂದಿತ್ತು.ಇದರಿಂದ ಜಾಗೃತರಾದ ತುರ್ತು ವಾಹನದ ಪೊಲೀಸರು ಹುಲಿಹೈದರ ಗ್ರಾಮದ ಸ್ಮಶಾನದ ರಸ್ತೆಯಲ್ಲಿ ಕಳ್ಳತನವಾದ ವಾಹನ ಬರುತ್ತಿರುವುದನ್ನು ಕಂಡರು. ಸದರಿ ಚಾಲಕನಿಗೆ ಎಡಭಾಗಕ್ಕೆ ವಾಹನ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರು. ಪೊಲೀಸರನ್ನು ಕಂಡ ಕಳ್ಳನು ಪಕ್ಕದಲ್ಲಿದ್ದ 112 ತುರ್ತು ವಾಹನಕ್ಕೆ ಢಿಕ್ಕಿ ಹೊಡೆದು ವಾಹನ ಸಹಿತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಢಿಕ್ಕಿ ಹೊಡೆದ ಪರಿಣಾಮ 112 ವಾಹನದ ಮುಂದಿನ ಬಾನೆಟ್, ಮಡ್ಗಾರ್ಡ್, ಫಾಗ್ ಲೈಟ್ ಹಾಗೂ ಎಡಗಡೆಯ ಹೆಡ್ಲೈಟ್ ಸಂಪೂರ್ಣ ಹಾನಿಗೊಳಗಾಗಿದೆ. ಘಟನೆಯ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸರು ಎಚ್ಚರಗೊಂಡು ಬೋಲೆರೊ ವಾಹನ ಹಾಗೂ ಕಳ್ಳನನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಅರಿತ ಕಳ್ಳನು ಕಾರಟಗಿಯ ಎಪಿಎಂಸಿ ಆವರಣದಲ್ಲಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಡ್ ಕಾನ್ಸ್ಟೇಬಲ್ ಮುತ್ತಣ್ಣ ನೀಡಿದ ದೂರು ಆಧಾರದ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







