Kanakagiri | ಕರಡಿ ದಾಳಿಗೆ ಒಳಗಾದ ಯುವಕನ ಮನೆಗೆ ತಹಶೀಲ್ದಾರ್ ಭೇಟಿ

ಕನಕಗಿರಿ : ಲಕ್ಷ್ಮೀಕೆರೆ ಸಮೀಪ ಕರಡಿ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಯುವಕನ ಆರೋಗ್ಯ ವಿಚಾರಿಸಲು ತಹಶೀಲ್ದಾರ್ ವಿಶ್ವನಾಥ ಮುರುಡಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಗುರುವಾರ ಗಾಯಾಳುವಿನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯುವಕನನ್ನು ಭೇಟಿಯಾದ ತಹಶೀಲ್ದಾರರು, ಘಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಅವರು, “ವನ್ಯಜೀವಿ ದಾಳಿಯಿಂದ ಸಂಕಷ್ಟಕ್ಕೊಳಗಾದ ಕುಟುಂಬಕ್ಕೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ತಕ್ಷಣ ಪರಿಹಾರ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಗಾಯಾಳುವಿನ ವೈದ್ಯಕೀಯ ವೆಚ್ಚ ಹಾಗೂ ಸರ್ಕಾರದ ನಿಯಮಾನುಸಾರ ದೊರೆಯುವ ಪರಿಹಾರವನ್ನು ಶೀಘ್ರವಾಗಿ ಒದಗಿಸಲಾಗುವುದು ಎಂದ ಅವರು, ಲಕ್ಷ್ಮೀಕೆರೆ ಭಾಗದಲ್ಲಿ ಕರಡಿ ಹಾವಳಿ ತಡೆಗೆ ಅರಣ್ಯ ಇಲಾಖೆಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಾಡಂಚಿನ ಪ್ರದೇಶಗಳಿಗೆ ಸಾರ್ವಜನಿಕರು ಏಕಾಂಗಿಯಾಗಿ ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ವೇಳೆ ಉಪ ವಲಯ ಅರಣ್ಯ ಅಧಿಕಾರಿ ಎಸ್.ಎಮ್.ಡಿ ಸುಲೇಮಾನ್, ಗ್ರಾಮ ಆಡಳಿತ ಅಧಿಕಾರಿ ಶಿವುಕುಮಾರ, ಜಿಲ್ಲಾ ಉಸ್ತುವರಿ ಸಚಿವ ಶಿವರಾಜ ತಂಗಡಗಿ ಆಪ್ತ ಸಾಹಯಕ ವೆಂಕಟೇಶ ಗೊಡಿನಾಳ, ಮುಖಂಡರಾದ ನಾಗರಾಜ ಬೊಂದಾಡೆ ಇತರರು ಇದ್ದರು.






